ಪಿಎಸ್ಐ ಹುದ್ದೆಗಳ ಅರ್ಜಿ ಆಹ್ವಾನಕ್ಕೆ ತಾತ್ಕಾಲಿಕ ಸ್ಥಗಿತ
ಬೆಂಗಳೂರು, ಮೇ 31: 2020-21ನೇ ಸಾಲಿನ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ಹುದ್ದೆಗಳ ನೇಮಕದ ಅರ್ಜಿ ಆಹ್ವಾನ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಸಂಬಂಧ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ, ರಾಜ್ಯದ ಕಮಿಷನರ್ ಗಳು ಹಾಗೂ ಎಸ್ಪಿಗಳಿಗೆ ತುರ್ತು ಸಂದೇಶ ರವಾನಿಸಿದ್ದಾರೆ.
ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಪಿಎಸ್ಐ ಹುದ್ದೆಗಳ ನೇಮಕಕ್ಕೆ ಜೂನ್ 1ರಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಿ ರಾಜ್ಯ ಸರಕಾರ ಇತ್ತೀಚೆಗೆ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿತ್ತು. ಈಗ ಅರ್ಜಿಯನ್ನು ಆಡಳಿತಾತ್ಮಕ ಕಾರಣದಿಂದ ಸ್ಥಗಿತಗೊಳಿಸಿರುವುದಾಗಿ ಹೇಳಿದೆ. ಮುಂದಿನ ದಿನಾಂಕವನ್ನು ನಂತರದಲ್ಲಿ ಪ್ರಕಟಿಸುವುದಾಗಿ ತಿಳಿಸಿದೆ.
ಇತ್ತೀಚೆಗಷ್ಟೇ ಪಿಎಸ್ಐ ನೇಮಕಾತಿ ವಯೋಮಿತಿಯನ್ನು ರಾಜ್ಯ ಸರಕಾರ ಹೆಚ್ಚಳ ಮಾಡಿದೆ. ಈ ಹಿಂದೆ ಹೊರಡಿಸಿದ್ದ ನೇಮಕಾತಿ ಜಾಹೀರಾತಿನಲ್ಲಿ ಹಳೇ ವಯೋಮಿತಿ ಯಥಾಪ್ರಕಾರ ಇತ್ತು. ಇದೀಗ ವಯೋಮಿತಿ ಹೆಚ್ಚಳ ಮಾಡಿ ಪುನಃ ನೇಮಕಾತಿ ಪ್ರಕ್ರಿಯೆ ಆರಂಭಿಸುವ ಸಾಧ್ಯತೆ ಇದೆ.
Next Story