ಕಾಣೆಯಾಗಿದ್ದ ಯುವಕನ ಮೃತದೇಹ ತುಂಗಾ ನದಿಯಲ್ಲಿ ಪತ್ತೆ
ಸಾವಿನ ಕುರಿತು ಕುಟುಂಬಸ್ಥರ ಅನುಮಾನ
ಶಿವಮೊಗ್ಗ, ಜೂ.1: ಮೂರು ದಿನದ ಹಿಂದೆ ಕಾಣೆಯಾಗಿದ್ದ ಯುವಕನ ಮೃತದೇಹ ಸೋಮವಾರ ತುಂಗಾ ನದಿಯಲ್ಲಿ ಪತ್ತೆಯಾಗಿದೆ. ಯುವಕನ ಸಾವಿನ ಕುರಿತು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು, ತನಿಖೆ ನಡೆಯುತ್ತಿದೆ.
ಅರುಣ್ (29) ಮೃತ ಯುವಕ. ಇವರು ಶಿವಮೊಗ್ಗ ಕೆಎಸ್ಸಾರ್ಟಿಸಿ ವಿಭಾಗೀಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಮೂರು ದಿನದ ಹಿಂದೆ ಅರುಣ್ ನಾಪತ್ತೆಯಾಗಿರುವ ಕುರಿತು ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೂರು ದಿನದ ಹಿಂದೆ ಅರುಣ್ ಅವರ ಸಂಬಂಧಪಟ್ಟ ಮೊಬೈಲ್, ಪರ್ಸ್ ಮತ್ತು ಶೂ ಪತ್ತೆಯಾಗಿತ್ತು. ಸ್ಥಳೀಯರು ಈ ಕುರಿತು ಪೊಲೀಸರಿಗೆ ತಿಳಿಸಿದ್ದರು. ಇವುಗಳನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ಆರಂಭಿಸಿದ್ದರು. ಆದರೆ, ಇಂದು ತುಂಗಾ ನದಿಹಿನ್ನೀರಿನಲ್ಲಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿದೆ. ಪರಿಶೀಲನೆ ಬಳಿಕ ಅದು ಅರುಣ್ ಮೃತದೇಹ ಎಂದು ತಿಳಿದು ಬಂದಿದೆ.
ಆದರೆ ಅರುಣ್ ಸಾವಿನ ಕುರಿತು ಅನುಮಾನ ವ್ಯಕ್ತವಾಗಿದ್ದು, ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಕುಟುಂಬಸ್ಥರು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ. ಅರುಣ್ ಅವರಿಗೆ ಇತ್ತೀಚೆಗಷ್ಟೇ ಮದುವೆ ನಿಶ್ಚಿತಾರ್ಥವಾಗಿತ್ತು. ಹಾಗಾಗಿ ಕುಟುಂದವರು ಮದುವೆ ತಯಾರಿಯಲ್ಲಿದ್ದರು. ಈ ವೇಳೆ ಅರುಣ್ ನಾಪತ್ತೆಯಾಗಿ ದ್ದು, ಪ್ರಕರಣ ದಾಖಲಾಗಿತ್ತು. ತುಂಗಾ ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.