ಮಾಸ್ಕ್ ಇಲ್ಲ, ಸುರಕ್ಷಿತ ಅಂತರವೂ ಇಲ್ಲ: ನಿಯಮ ಮರೆತ ಆರೋಗ್ಯ ಸಚಿವ ಶ್ರೀರಾಮುಲು
ನೂರಾರು ಸಂಖ್ಯೆಯಲ್ಲಿ ಗುಂಪುಗೂಡಿ ಸ್ವಾಗತಿಸಿದ ಬಿಜೆಪಿ ಕಾರ್ಯಕರ್ತರು
ಚಿತ್ರದುರ್ಗ, ಜೂ.2: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಸರಕಾರ ವಿಧಿಸಿರುವ ನಿಯಮಾವಳಿಗಳನ್ನು ಸ್ವತಃ ಆರೋಗ್ಯ ಸಚಿವ ಶ್ರೀರಾಮುಲು ಅವರೇ ಪಾಲಿಸದ ಘಟನೆ ನಡೆದಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಚಳ್ಳಕೆರೆ ತಾಲೂಕಿನ ಪರಶುರಾಮಪುರ ಹೋಬಳಿ ಬಳಿಯಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಬ್ಯಾರೇಜ್ ತುಂಬಿರುವ ಪ್ರಯುಕ್ತ ಬಾಗೀನ ಅರ್ಪಿಸಲು ಆಗಮಿಸಿದ್ದರು. ಈ ವೇಳೆ ಅವರಿಗೆ ಪರಶುರಾಂಪುರ ಗ್ರಾಮದಲ್ಲಿ ನೂರಾರುಜನ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಹಣ್ಣುಗಳು ಮತ್ತು ಹೂವಿನ ಹಾರವನ್ನು ಕ್ರೇನ್ ಮೂಲಕ ಹಾಕಿದರು.
ಈ ಸಂದರ್ಭ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಸರಕಾರ ವಿಧಿಸಿದ್ದ ಮಾಸ್ಕ್, ಸ್ಯಾನಿಟೈಸರ್, ಸುರಕ್ಷಿತ ಅಂತರ ಕಾಯ್ದುಕೊಳ್ಳುವ ನಿಯಮಾವಳಿಗಳನ್ನು ಪಾಲಿಸದೇ ಸಚಿವರು, ಸಂಸದರು ಸೇರಿದಂತೆ ಕಾರ್ಯಕರ್ತರು, ಅಭಿಮಾನಿಗಳು ಭಾಗಿಯಾಗಿರುವುದಕ್ಕೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಸಂಸದ ಎ. ನಾರಾಯಣಸ್ವಾಮಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಓಬಳೇಶ್, ಬಿಜೆಪಿ ಮುಖಂಡರಾದ ಜಯ ಪಾಲಯ್ಯ ಸೇರಿದಂತೆ ಬಿಜೆಪಿಯ ಕಾರ್ಯಕರ್ತರು, ಅಭಿಮಾನಿಗಳು ಹಾಜರಿದ್ದರು.