ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್: ಯುವತಿ ವಿರುದ್ಧ ಕುಶಾಲನಗರ ಪೊಲೀಸರಿಗೆ ದೂರು
ಮಡಿಕೇರಿ ಜೂ.3: ಯುವತಿಯೊಬ್ಬಳು ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರವಾದಿ ಪೈಗಂಬರರ ಬಗ್ಗೆ ಫೇಸ್ ಬುಕ್ ಖಾತೆಯಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದಾಳೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯು ಕುಶಾಲ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಆರೋಪಿ ಯುವತಿಯನ್ನು ವಿಂಧ್ಯಾ ಪೂಣಚ್ಚ ಎಂದು ಗುರುತಿಸಿರುವುದಾಗಿ ದೂರಿನಲ್ಲಿ ತಿಳಿಸಿರುವ ಪಕ್ಷದ ಪ್ರಮುಖರು, ತಕ್ಷಣ ಆಕೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ದೇಶ, ರಾಜ್ಯ ಮತ್ತು ಜಿಲ್ಲೆ ಕೊರೋನ ಸೋಂಕಿನ ಆತಂಕವನ್ನು ಎದುರಿಸುತ್ತಾ ಸಂಕಷ್ಟದಲ್ಲಿರುವಾಗ ಶಾಂತಿಯುತ ಸಮಾಜದ ಸ್ವಾಸ್ಥ್ಯ ಕೆಡಿಸುವ ಕಾರ್ಯವನ್ನು ಕೆಲವರು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಐಎನ್ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ, ಕೆಪಿಸಿಸಿ ಮೈಸೂರು ವಿಭಾಗದ ಸಾಮಾಜಿಕ ಜಾಲತಾಣದ ಅಧ್ಯಕ್ಷ ಚಿನ್ನಪ್ಪ, ಕಾರ್ಮಿಕ ಘಟಕದ ಕಾರ್ಯದರ್ಶಿ ಅಜ್ಜಳ್ಳಿ ರವಿ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ಅನಂತ್ ಕುಮಾರ್, ಕುಶಾಲನಗರ ಬ್ಲಾಕ್ ಉಸ್ತುವಾರಿ ಪ್ರದೀಪ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಸುರೇಶ್ ಟಿ.ಈ., ಸಾಮಾಜಿಕ ಜಾಲತಾಣ ಅಧ್ಯಕ್ಷ ಸೂರಜ್ ಹೊಸೂರು ಮತ್ತಿತರರು ಹಾಜರಿದ್ದರು.