ಕೊರೋನದ ಬಗ್ಗೆ ಸಚಿವರಿಂದಲೇ ನಿರ್ಲಕ್ಷ್ಯ: ಸುರಕ್ಷಿತ ಅಂತರ ಮರೆತ ರಮೇಶ್ ಜಾರಕಿಹೊಳಿ, ಈಶ್ವರಪ್ಪ
ಬೆಳಗಾವಿ, ಜೂ.5: ಜಿಲ್ಲಾ ಉಸ್ತುವಾರಿ ಸಚಿವರಾಗಿ ಮೊದಲ ಬಾರಿಗೆ ರಮೇಶ್ ಜಾರಕಿಹೊಳಿ ಜಿಲ್ಲೆಯ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದು, ಈ ವೇಳೆ, ಸ್ವಾಗತಿಸಲು ಮುಂದಾದ ಕಾರ್ಯಕರ್ತರು, ಬೆಂಬಲಿಗರು ಸುರಕ್ಷಿತ ಅಂತರ ಮರೆತು ಮುಗಿಬಿದ್ದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಗೋಕಾಕ್ನಿಂದ ನೇರವಾಗಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತಕ್ಕೆ ಆಗಮಿಸಿದ ಸಚಿವರು, ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಬಳಿಕ ಡಾ.ಬಾಬಾಸಾಹೇಬ್ ಅಂಬೇಡ್ಕರ್, ಛತ್ರಪತಿ ಶಿವಾಜಿ ಹಾಗೂ ಬಸವೇಶ್ವರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದರು. ಶಾಸಕ ಅನಿಲ್ ಬೆನಕೆ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸುರಕ್ಷಿತ ಅಂತರ ಮರೆತ ಸಚಿವ ಈಶ್ವರಪ್ಪ: ಕಲಬುರಗಿಯಲ್ಲಿ ಉದ್ಯೋಗ ಖಾತ್ರಿ ಕಾಮಗಾರಿ ವೀಕ್ಷಣೆ ವೇಳೆ ಸಚಿವ ಕೆ.ಎಸ್. ಈಶ್ವರಪ್ಪ ಸುರಕ್ಷಿತ ಅಂತರ ಮರೆತು ನಿರ್ಲಕ್ಷ್ಯ ತೋರಿದ ಘಟನೆ ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ನಡೆದಿದೆ. ಸ್ಥಳೀಯ ಬಿಜೆಪಿ ಮುಖಂಡರೊಂದಿಗೆ ಸುರಕ್ಷಿತ ಅಂತರ ಮರೆತು ಕಾಮಗಾರಿ ವೀಕ್ಷಣೆ ಮಾಡಿದರು ಎಂದು ತಿಳಿದುಬಂದಿದೆ.
ನಂತರ ನಡೆದ ಸನ್ಮಾನ ಕಾರ್ಯಕ್ರಮದಲ್ಲೂ ಸುರಕ್ಷಿತ ಅಂತರ ಕಾಣಿಸಲಿಲ್ಲ. ಕೊರೋನ ಬಗ್ಗೆ ಸಚಿವರ ನಿರ್ಲಕ್ಷ್ಯ ಎದ್ದುಕಾಣಿಸುತ್ತಿತ್ತು. ಈ ವೇಳೆ ಸಂಸದ ಉಮೇಶ್ ಜಾಧವ್ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು ಹಾಜರಿದ್ದರು.