ರಾಜ್ಯವ್ಯಾಪಿ 28 ಸಾವಿರ ಕಿ.ಮೀ ರಸ್ತೆ ಮೇಲ್ದರ್ಜೆಗೆ: ಡಿಸಿಎಂ ಗೋವಿಂದ ಕಾರಜೋಳ
ಬಾಗಲಕೋಟೆ, ಜೂ.9: ಪ್ರಸ್ತುತ ವಾರ್ಷಿಕ ಸಾಲಿನಲ್ಲಿಯೇ ಲೋಕೋಪಯೋಗಿ ಇಲಾಖೆಯಿಂದ ರಾಜ್ಯವ್ಯಾಪಿ ಹಳ್ಳಿ ರಸ್ತೆ ಸೇರಿದಂತೆ ಒಟ್ಟು 28 ಸಾವಿರ ಕಿ.ಮೀ ರಸ್ತೆಯನ್ನು ಅಭಿವೃದ್ಧಿಪಡಿಸಿ ಮೇಲ್ದರ್ಜೆಗೇರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಭರವಸೆ ನೀಡಿದರು.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ವರ್ಷ 18 ಸಾವಿರ ಕಿ.ಮೀ ಹಳ್ಳಿ ರಸ್ತೆಯನ್ನು ಅಭಿವೃದ್ಧಿಪಡಿಸಿ ಜಿಲ್ಲಾ ಮುಖ್ಯರಸ್ತೆಯಾಗಿ ಹಾಗೂ 10 ಸಾವಿರ ಕಿ.ಮೀ. ಜಿಲ್ಲಾ ಮುಖ್ಯರಸ್ತೆಯನ್ನು ರಾಜ್ಯ ಹೆದ್ದಾರಿಯಾಗಿ ಪರಿವರ್ತಿಸುವುದು ಸೇರಿದಂತೆ ಒಟ್ಟು 28 ಸಾವಿರ ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ನುಡಿದರು.
ನೇಮಕ: ಲೋಕೋಪಯೋಗಿ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ 1 ಸಾವಿರ ಮಂದಿ ಟ್ರೈನಿ ಇಂಜಿನಿಯರ್ ಗಳ ನೇಮಕ ಮಾಡಿಕೊಳ್ಳಲು ಸಿದ್ಧತೆ ನಡೆದಿದೆ. ಇದರಲ್ಲಿ 700 ಮಂದಿ ಪದವೀಧರ ಇಂಜಿನಿಯರ್ ಹಾಗೂ 300 ಮಂದಿ ಡಿಪ್ಲೋಮಾ ಇಂಜಿನಿಯರ್ ಗಳಿಗೆ ಅವಕಾಶ ದೊರೆಯಲಿದೆ ಎಂದು ನುಡಿದರು.
ರಾಜ್ಯಸಭೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಯಾವುದೇ ಅಸಮಾಧಾನವಿಲ್ಲ ಎಂದು ಸ್ಪಷ್ಟಪಡಿಸಿದ ಕಾರಜೋಳ, ನೀವಿಲ್ಲಿ (ಮಾಧ್ಯಮದವರು) ಬಾಗಲಕೋಟೆಯಲ್ಲಿ ಇರುತ್ತೀರಿ. ನಾನು ಸದಾ ಬಿಎಸ್ವೈ ಪಕ್ಕದಲ್ಲಿಯೇ ಇರುತ್ತೇನೆ. ಅವರಿಗೆ ಬೇಸರವೂ ಇಲ್ಲ. ಅತೃಪ್ತಿಯೂ ಆಗಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಪರಿಷತ್ತಿನಲ್ಲೂ ಸಾಮಾನ್ಯರಿಗೆ ಟಿಕೆಟ್'
ರಾಜ್ಯಸಭೆಗೆ ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿರುವ ಸಂಪ್ರದಾಯ, ಮುಂದೆ ವಿಧಾನ ಪರಿಷತ್ಗೆ ಆಯ್ಕೆ ವಿಚಾರದಲ್ಲೂ ಮುಂದುವರಿಯಬಹುದು.
-ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ