ರೈತ ಗೀತೆ ಕಾಲರ್ ರಿಂಗ್ ಟೋನ್ ಆಗಲಿ ಎಂದ ಬಿ.ಸಿ.ಪಾಟೀಲ್
ಬೆಂಗಳೂರು, ಜೂ.19: ‘ಹಲೋ’ ಬದಲಿಗೆ ‘ಜೈ ಕಿಸಾನ್’ ಎಂದು ಹೇಳಿ ಹೆಮ್ಮೆ ವ್ಯಕ್ತಪಡಿಸಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್, ಇದೀಗ ‘ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವ ಯೋಗಿಯ ನೋಡಲ್ಲಿ’ ಎನ್ನುವ ರಾಷ್ಟ್ರಕವಿ ಕುವೆಂಪು ವಿರಚಿತ ಪದ್ಯವನ್ನು ಇನ್ನಷ್ಟು ಪ್ರಚುರಪಡಿಸಲು ಮುಂದಾಗಿದ್ದಾರೆ.
ಈ ಹಾಡು ಕರ್ನಾಟಕದಲ್ಲಿ ರೈತ ಗೀತೆಯೆಂದೆ ಪ್ರಖ್ಯಾತಿ ಹೊಂದಿದ್ದು, ಅನ್ನದಾತನ ಮಹತ್ವವೇನು? ಎನ್ನುವುದನ್ನು ಸಾರಿಸಾರಿ ಹೇಳುತ್ತದೆ. ಅಷ್ಟೇ ಅಲ್ಲ ಕಾರ್ಯಕ್ರಮಗಳಲ್ಲಿ ಈ ಗೀತೆ ಮೊಳಗುತ್ತಿದ್ದಂತೆಯೇ ಎದ್ದುನಿಂತು ಗೌರವವನ್ನೂ ಸೂಚಿಸಲಾಗುತ್ತದೆ. ಇದೀಗ ಕೃಷಿ ಸಚಿವರು ರೈತರ ಮಹತ್ವವನ್ನು ಸಾರುವ ಈ ಹಾಡನ್ನು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು, ಅಧಿಕಾರಿಗಳು, ಸಿಬ್ಬಂದಿ, ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯೂ ಸೇರಿದಂತೆ ರೈತರು ತಾವು ಬಳಸುವ ಮೊಬೈಲ್ನ ಕಾಲರ್ ಟೋನ್, ರಿಂಗ್ ಟೋನ್ ಆಗಿ ಬಳಸುವ ಚಿಂತನೆ ನಡೆಸಿದ್ದಾರೆ.
ಕೆಲವು ದಿನಗಳ ಹಿಂದೆ ‘ಹಲೋ’ ಬದಲಿಗೆ ‘ಜೈ ಕಿಸಾನ್’ ಬಳಸುವಂತೆ ನಿರ್ದೇಶನ ನೀಡಿದ್ದ ಬಿ.ಸಿ.ಪಾಟೀಲ್, ಇದೀಗ ರೈತಗೀತೆಯನ್ನು ಕಾಲರ್ ರಿಂಗ್ ಟೋನ್ ಆಗಿ ಬಳಸಲು ಯೋಜನೆ ರೂಪಿಸಿದ್ದಾರೆ.