ಬೆಂಗಳೂರು 'ಕೊರೋನ' ಉಸ್ತುವಾರಿ ನನ್ನದೆ: ಸಚಿವ ಡಾ.ಸುಧಾಕರ್
ಬೆಂಗಳೂರು, ಜೂ. 30: ಬೆಂಗಳೂರು ನಗರದ ಕೊರೋನ ಸೋಂಕು ನಿರ್ವಹಣೆ ಉಸ್ತುವಾರಿ ನನ್ನದೆ. ನನ್ನ ಅನುಪಸ್ಥಿತಿಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರು ಅದರ ಹೊಣೆಹೊತ್ತು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಕೊರೋನ ಸೋಂಕು ನಿರ್ವಹಣೆ ಸಂಬಂಧ ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವೈದ್ಯಕೀಯ ಶಿಕ್ಷಣ ಇಲಾಖೆ ಜವಾಬ್ದಾರಿಯನ್ನು ಹೊತ್ತಿರುವ ನಾನು, ಬೆಂಗಳೂರು ಕೋವಿಡ್ ನಿರ್ವಹಣೆ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಲಿದ್ದೇನೆ. ಸಂಪುಟದ ಸಹೋದ್ಯೋಗಿಗಳೆಲ್ಲರೂ ಸಿಎಂ ಸೂಚನೆಯಂತೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಕೊರೋನ ಸೋಂಕಿಗೆ ಒಳಗಾಗಿದ್ದ ಪತ್ನಿ, ಪುತ್ರಿ ಹಾಗೂ ತಂದೆ ಒಳಗಾಗಿದ್ದ ಹಿನ್ನೆಲೆಯಲ್ಲಿ ನಾನು ಕ್ವಾರಂಟೈನ್ ನಲ್ಲಿದ್ದೇ. ಆ ಹಿನ್ನೆಲೆಯಲ್ಲಿ ಅಶೋಕ್ ಅವರಿಗೆ ಆ ಹೊಣೆ ನೀಡಲಾಗಿತ್ತು. ಇದೀಗ ನಾನು ಕ್ವಾರಂಟೈನ್ ಮುಗಿಸಿಬಂದಿದ್ದು, ನಾನೇ ಉಸ್ತುವಾರಿ. ಈ ವಿಚಾರದಲ್ಲಿ ನಾವು ಯಾವುದೇ ರಾಜಕೀಯ ಮಾಡದೆ ಸಾಮೂಹಿಕವಾಗಿ ಒಗ್ಗಟ್ಟಿನಿಂದ ಸೋಂಕು ನಿಯಂತ್ರಣಕ್ಕೆ ಶ್ರಮಿಸುತ್ತಿದ್ದೇವೆ ಎಂದರು.