ರಾಜ್ಯದಲ್ಲಿಂದು 1,502 ಮಂದಿಗೆ ಕೊರೋನ ಪಾಸಿಟಿವ್: ಸೋಂಕಿಗೆ ಮತ್ತೆ 19 ಮಂದಿ ಬಲಿ
ಬೆಂಗಳೂರು ನಗರ 889, ದಕ್ಷಿಣ ಕನ್ನಡದಲ್ಲಿ 90 ಮಂದಿಗೆ ಸೋಂಕು ದೃಢ
ಸಾಂದರ್ಭಿಕ ಚಿತ್ರ
ಬೆಂಗಳೂರು, ಜು.2: ಕರ್ನಾಟಕದಲ್ಲಿ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ವ್ಯಾಪಕ ಹೆಚ್ಚಳವಾಗುತ್ತಿದೆ. ಸೋಂಕಿತರು ಸಾವನ್ನಪ್ಪುತ್ತಿರುವ ಪ್ರಕರಣದಲ್ಲೂ ಏರಿಕೆಯಾಗುತ್ತಿದೆ. ಬುಧವಾರ ಸಂಜೆಯಿಂದ ಗುರುವಾರ ಸಂಜೆವರೆಗೆ ಮತ್ತೆ 1,502 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 18,016 ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 19 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಬಳ್ಳಾರಿ 4, ದಕ್ಷಿಣ ಕನ್ನಡ, ಬೆಂಗಳೂರು ನಗರ ಜಿಲ್ಲೆಯಲ್ಲಿ ತಲಾ 3, ಉಡುಪಿ, ಕೊಪ್ಪಳ, ಮೈಸೂರು, ಹಾಸನ, ತುಮಕೂರು, ಕರಬುರಗಿ, ಬೆಳಗಾವಿ, ಉತ್ತರ ಕನ್ನಡ, ಗದಗ ಜಿಲ್ಲೆಯಲ್ಲಿ ತಲಾ 1 ಒಂದು ಸಾವು ಸಂಭವಿಸಿದೆ. ಈ ಮೂಲಕ ಸಾವಿನ ಸಂಖ್ಯೆ 272ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 889, ದಕ್ಷಿಣ ಕನ್ನಡ 90, ಮೈಸೂರು 68, ಬಳ್ಳಾರಿ 65, ಧಾರವಾಡ 47, ವಿಜಯಪುರ 39, ರಾಮನಗರ 39, ಕಲಬುರಗಿ 38, ಬೀದರ್ 32, ತುಮಕೂರು 26, ಶಿವಮೊಗ್ಗ 23, ಮಂಡ್ಯ 19, ಉತ್ತರ ಕನ್ನಡ 17, ಹಾಸನ 15, ಉಡುಪಿ 14, ಕೋಲಾರ 12, ರಾಯಚೂರು 11, ಬಾಗಲಕೋಟೆ 10, ದಾವಣಗೆರೆ 8, ಯಾದಗಿರಿ 7, ಬೆಳಗಾವಿ 7, ಕೊಡಗು 6, ಬೆಂಗಳೂರು ಗ್ರಾಮಾಂತರ 5, ಹಾವೇರಿ, ಕೊಪ್ಪಳದಲ್ಲಿ ತಲಾ 4, ಚಿತ್ರದುರ್ಗದಲ್ಲಿ 3, ಗದಗ 2, ಚಿಕ್ಕಮಗಳೂರು ಮತ್ತು ಚಿಕ್ಕಬಳ್ಳಾಪುರದಲ್ಲಿ ತಲಾ 1 ಪ್ರಕರಣ ಪಾಸಿಟಿವ್ ಬಂದಿದೆ.
ಒಟ್ಟಾರೆ ರಾಜ್ಯದಲ್ಲಿ 18,016 ಕೊರೋನ ಸೋಂಕಿತರ ಪೈಕಿ 8,334 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 271 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 272 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 9,406 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಗುರುವಾರ ಒಟ್ಟು 16210 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ 14470 ಮಾದರಿಗಳು ನೆಗೆಟಿವ್ ಬಂದಿದೆ. ಉಳಿದಂತೆ 44950 ಜನರನ್ನು ನಿಗಾವಣೆಯಲ್ಲಿಡಲಾಗಿದ್ದು, 23841 ಪ್ರಥಮ ಸಂಪರ್ಕಿತರು ಹಾಗೂ 21109 ದ್ವಿತೀಯ ಸಂಪರ್ಕಿತರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.