ಕೆರೆ ನಿರ್ಮಾತೃ ಕಾಮೇಗೌಡರಿಗೆ ಜೀವಿತಾವಧಿಯವರೆಗೆ ಉಚಿತ ಬಸ್ ಪಾಸ್
ಬೆಂಗಳೂರು, ಜು.2: ಆಧುನಿಕ ಭಗೀರಥ ಹಾಗೂ ಕೆರೆಗಳ ಮನುಷ್ಯರೆಂದೇ ಖ್ಯಾತರಾಗಿರುವ ಕಾಮೇಗೌಡ ಅವರಿಗೆ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ಬಸ್ಸುಗಳಲ್ಲಿ ಜೀವಿತಾವಧಿಯವರೆಗೂ ಉಚಿತವಾಗಿ ಸಂಚರಿಸಲು ಬಸ್ ಪಾಸ್ ನೀಡಲಾಗಿದೆ.
ರಾಜ್ಯ ಸರಕಾರ ಕಾಮೇಗೌಡ ಅವರ ಅಪರಿಮಿತ ಸಾಧನೆಗಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಎಲ್ಲಾ ಮಾದರಿಯ ಬಸ್ಸುಗಳಲ್ಲಿ, ಅವರ ಜೀವಿತಾವಧಿಯವರೆಗೆ, ಉಚಿತವಾಗಿ ಸಂಚರಿಸಲು ಬಸ್ ಪಾಸನ್ನು ನೀಡಲು ಅನುಮತಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೆಶಕ ಶಿವಯೋಗಿ ಕಳಸದ ಪ್ರಕಟನೆಯಲ್ಲಿ ತಿಳಿಸಿದ್ದರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡ ಅವರ ಅನನ್ಯ ಪರಿಸರ ಕಾಳಜಿಯನ್ನು ಮತ್ತು ಸಾಧನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಉಲ್ಲೇಖಿಸಿದ್ದರು.
ಕಾಮೇಗೌಡ ಅವರಂತಹ ಸಂತತಿ ಇನ್ನೂ ಹೆಚ್ಚಲಿ: ಮುಖ್ಯಮಂತ್ರಿ ಯಡಿಯೂರಪ್ಪ ಆಶಯ
ಪರಿಸರ ಪ್ರೇಮಿ ಕಾಮೇಗೌಡ ಅವರಂತಹ, ಬೆಲೆ ಕಟ್ಟಲಾಗದ ಪರಿಸರ ಕಾಳಜಿಯುಳ್ಳವರ ಸಂತತಿ ಇನ್ನೂ ಹೆಚ್ಚಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಆಶಯ ವ್ಯಕ್ತಪಡಿಸಿದ್ದಾರೆ.
ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, ಕಾಮೇಗೌಡರ ಪರಿಸರ ಸೇವೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ `ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದನ್ನು ಸ್ಮರಿಸಿಕೊಂಡಿದ್ದಾರೆ. ಮಾಧ್ಯಮವೊಂದರಲ್ಲಿ ಈ ಬಗ್ಗೆ ತಮ್ಮ ಆಸೆ ವ್ಯಕ್ತಪಡಿಸಿದ್ದ ಕಾಮೇಗೌಡರ ಅಭಿಲಾಷೆಯಂತೆ ಉಚಿತ ಬಸ್ ಪಾಸ್ ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಪರಿಸರ ಪ್ರೇಮಿ ಕಾಮೇಗೌಡರಿಗೆ ಜೀವತಾವಧಿ ಉಚಿತ ಬಸ್ ಪಾಸ್
— CM of Karnataka (@CMofKarnataka) July 2, 2020
ಅಪರೂಪದ ಪರಿಸರ ಕಾಳಜಿಯ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿಯ ಕಾಮೇಗೌಡ ಅವರಿಗೆ ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಜೀವಿತಾವಧಿ ಉಚಿತ ಬಸ್ ಪಾಸ್ ನೀಡಿದೆ. 1/3 pic.twitter.com/8QTfiO4T20