ಸರಕಾರದ ನಿರ್ಲಕ್ಷ್ಯದಿಂದ ಸಾಮಾನ್ಯ ಜನರು ಕಂಗಾಲು: ಪ್ರಿಯಾಂಕ್ ಖರ್ಗೆ ಆಕ್ರೋಶ
ಬೆಂಗಳೂರು, ಜು. 7: ಯಮಸ್ವರೂಪಿ ಕೊರೋನ ಸೋಂಕಿಗೆ ಮೊದಲ ಬಲಿಯಾದ ಕಲಬುರಗಿ ಜಿಲ್ಲೆಯಲ್ಲಿ ಇದುವರೆಗೂ ಒಂದೇ ಒಂದು ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದ್ದು, ಸರಕಾರದ ನಿರ್ಲಕ್ಷದಿಂದಲೇ ಸಾಮಾನ್ಯ ಜನತೆ ಕಂಗಾಲಾಗಿದ್ದಾರೆ' ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಅವರು, `ಜಿಮ್ಸ್ ಆಸ್ಪತ್ರೆಯಲ್ಲಿ ಮಾತ್ರ ಕೊರೋನ ಪರೀಕ್ಷಾ ಪ್ರಯೋಗಾಲಯವಿದೆ. ಇಲ್ಲಿ ಪ್ರತಿನಿತ್ಯ ಸಾವಿರಾರು ಮಂದಿ ಮಾದರಿಯನ್ನು ಪರೀಕ್ಷೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 5 ಸಾವಿರ ಮಂದಿಯ ಪರೀಕ್ಷಾ ವರದಿ ನೀಡಬೇಕಿದೆ. ದೊಡ್ಡ ಸಂಖ್ಯೆಯಲ್ಲಿ ಜಿಲ್ಲೆಗೆ ಹೊರಗಿನಿಂದ ವಲಸೆ ಕಾರ್ಮಿಕರು ಬಂದಿದ್ದು, ಸೋಂಕಿನ ಪರೀಕ್ಷಾ ವರದಿಯೆ ಸಿಗದಿದ್ದರೆ ಹೇಗೇ?' ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು ಹೊರತುಪಡಿಸಿದರೆ ಅತಿ ಹೆಚ್ಚು ಸೋಂಕಿತರು ಇರುವ ಜಿಲ್ಲೆ ಕಲಬುರಗಿ. ಒಂದೇ ಪ್ರಯೋಗಾಲಯದ ಕಾರಣ ನಾಲ್ಕೈದು ದಿನ ಪರೀಕ್ಷಾ ವರದಿಗೆ ಕಾಯಬೇಕಿದೆ. ಇದರಿಂದ ಸೋಂಕು ಹರಡುತ್ತಿದ್ದು, ಕೂಡಲೇ ಜಿಲ್ಲೆಯಲ್ಲಿ ಇನ್ನೂ ಒಂದೆರಡು ಪ್ರಯೋಗಾಲಯ ಸ್ಥಾಪಿಸಲು ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.