ರಾಜ್ಯ ಕೃಷಿ ಉತ್ಪನ್ನಗಳ ಮೇಲೆ ಕೇಂದ್ರದ ಹಸ್ತಕ್ಷೇಪದ ಬಗ್ಗೆ ಬಿಎಸ್ವೈ ಮೌನ ಯಾಕೆ: ಡಿಕೆಶಿ ಪ್ರಶ್ನೆ
ಬೆಂಗಳೂರು, ಜು.8: ರಾಜ್ಯದ ಕೃಷಿ ಉತ್ಪನ್ನಗಳ ವಿಚಾರದಲ್ಲಿ ಕೇಂದ್ರ ಸರಕಾರದ ಹಸ್ತಕ್ಷೇಪದ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಕಾರ ಎತ್ತದೆ ಯಾಕೆ ಕೈಕಟ್ಟಿ ಕುಳಿತಿದ್ದಾರೆಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕೇಂದ್ರ ಸರಕಾರ ವ್ಯಾಪಾರ ಹಾಗೂ ವಾಣಿಜ್ಯದ ಹೆಸರಿನಲ್ಲಿ ರಾಜ್ಯ ಸರಕಾರಕ್ಕಿರುವ ಸಾರ್ವಭೌಮ ಅಧಿಕಾರದ ಮೇಲೆ ದಬ್ಬಾಳಿಕೆ ಮಾಡುತ್ತಾ ತನ್ನ ಸುಗ್ರೀವಾಜ್ಞೆ ಮೂಲಕ ಒಕ್ಕೂಟ ವ್ಯವಸ್ಥೆಯ ತತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಕೇಂದ್ರದ ಸುಗ್ರೀವಾಜ್ಞೆ ಅನುಸಾರ ಎಪಿಎಂಸಿ ಕಾಯ್ದೆ ಕೇವಲ ಅದರ ಪ್ರಾಂಗಣಕ್ಕೆ ಸೀಮಿತವಾಗಿದೆ. ಹೀಗಾಗಿ ರೈತರಿಗೆ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ ಎಪಿಎಂಸಿ ಪ್ರಾಂಗಣದಲ್ಲಿನ ಕೃಷಿ ಉತ್ಪನ್ನಗಳ ವಹಿವಾಟಿನ ಮೇಲಿನ ಮಾರುಕಟ್ಟೆ ಶುಲ್ಕವನ್ನು ಕೂಡ ರಾಜ್ಯ ಸರಕಾರ ಈ ಕೂಡಲೇ ರದ್ದು ಪಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
Next Story