ಕರ್ನಾಟಕದಲ್ಲಿ ಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕೆ 3,391 ಕೋಟಿ ರೂ. ಸಾಲ ಮಂಜೂರು: ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ, ಜು.10: ಕೊರೋನ ಹೊಡೆತದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕಾಗಿ ಕರ್ನಾಟಕದಲ್ಲಿ 66,785 ಉದ್ಯಮಿಗಳಿಗೆ 3,391 ಕೋಟಿ ರೂ.ಸಾಲ ಮಂಜೂರಾಗಿದ್ದು, ಈಗಾಗಲೇ 2,024 ಕೋಟಿ ವಿತರಣೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಶುಕ್ರವಾರ ಹುಬ್ಬಳ್ಳಿ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೈಗಾರಿಕೆಗಳ ಪುನಶ್ಚೇತನಕ್ಕೆ ಸರಕಾರಿ ಸ್ವಾಮ್ಯದ ಬ್ಯಾಂಕ್ಗಳು 57 ಸಾವಿರ ಕೋಟಿ ಹಾಗೂ ಖಾಸಗಿ ಬ್ಯಾಂಕ್ಗಳು 44 ಸಾವಿರ ಕೋಟಿ ಸಾಲ ನೀಡಿವೆ. ಒಟ್ಟಾರೆಯಾಗಿ 1.10 ಲಕ್ಷ ಸಾಲ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಜನಧನ ಖಾತೆಯ ಹೊಂದಿರುವ 20.65 ಕೋಟಿ ಮಹಿಳೆಯರಿಗೆ ತಲಾ 1500 ರಂತೆ ಅವರ ಖಾತೆಗೆ ವರ್ಗಾವಣೆ ಮಾಡಲಾಗಿದೆ. 2.3 ಕೋಟಿ ಕಟ್ಟಡ ಕಾರ್ಮಿಕರಿಗೆ 4,312 ಕೋಟಿ ಆರ್ಥಿಕ ಸಹಾಯ ನೀಡಲಾಗಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 8.94 ಕೋಟಿ ಜನರಿಗೆ 17,891 ಕೋಟಿ ವಿತರಿಸಲಾಗಿದೆ ಎಂದು ತಿಳಿಸಿದರು.
ಈಗಾಗಲೇ 8 ಲಕ್ಷ ಮೆಟ್ರಿಕ್ ಟನ್ ಆಹಾರಧಾನ್ಯವನ್ನು 1.22 ಕೋಟಿ ವಲಸೆ ಕಾರ್ಮಿಕರಿಗೆ ವಿತರಣೆ ಮಾಡಲಾಗಿದೆ. ಉಜ್ವಲ ಯೋಜನೆಯಡಿ 8.52 ಕೋಟಿ ಬಡ ಕುಟುಂಬಗಳಿಗೆ ಜೂನ್ ಅಂತ್ಯದವರೆಗೆ 3.46 ಕೋಟಿ ಉಚಿತ ಸಿಲಿಂಡರ್ ನೀಡಲಾಗಿದೆ ಎಂದರು.