ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದ.ಕ. ಡಿಸಿಗೆ ಮನವಿ ಸಲ್ಲಿಸಿದ ಎಸ್ಸೆಸ್ಸೆಫ್
ಮಂಗಳೂರು, ಜು.15: ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನಿಯೋಗವು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಜಿಲ್ಲಾಧಿಕಾರಿಯ ಮುಖಾಂತರ ಮುಖ್ಯಮಂತ್ರಿಗೆ ಲಿಖಿತ ಮನವಿ ನೀಡಿತು.
ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನ ಹೆಸರಿನಲ್ಲಿ ಕೇಳಿ ಬರುತ್ತಿರುವ ಆರೋಪದ ಬಗ್ಗೆ ತಿಳಿಸಲಾಯಿತು. ಎಸ್ಸೆಸ್ಸೆಫ್ ನಡೆಸುತ್ತಿರುವ ಸಾಮಾಜಿಕ ಸೇವೆಯ ವರದಿಯನ್ನು ಜಿಲ್ಲಾಧಿಕಾರಿಗೆ ನೀಡಿ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿ ಜನರಿಗೆ ಅತೀ ಅಗತ್ಯವಾಗಿರುವ ಬೇಡಿಕೆಗಳನ್ನು ಮುಂದಿಡಲಾಯಿತು.
ಪ್ರಮುಖ ಬೇಡಿಕೆಗಳು
►ಈ ಸಂಕಷ್ಟದ ಸಮಯದಲ್ಲಿ ಕೋರೋನ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ವಿಧಿಸಬಾರದು.
►ಕೊರೋನಾ ತಪಾಸಣಾ ಮತ್ತು ಚಿಕಿತ್ಸಾ ವೆಚ್ಚವನ್ನು ಪಡೆಯದೆ ಉಚಿತ ಸೇವೆ ನೀಡುವುದು. ಇದರ ಬಗ್ಗೆ ಸರಕಾರ ಗಮನಹರಿಸುವುದು. ಈಗಾಗಲೇ ಉಸ್ತುವಾರಿ ಸಚಿವರು ಈ ಕುರಿತಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಸೇವೆ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ. ಈ ಬಗ್ಗೆ ಆಸ್ಪತ್ರೆಗಳಿಗೆ ಮಾಹಿತಿ ನೀಡಬೇಕು. ಇದು ಇವತ್ತಿನಿಂದಲೇ ಕಾರ್ಯರೂಪಕ್ಕೆ ಬರಬೇಕು ಮತ್ತು ಇದು ರಾಜ್ಯದಾದ್ಯಂತ ವಿಸ್ತರಣೆ ಮಾಡಬೇಕು.
►ಖಾಸಗಿ ಆಸ್ಪತ್ರೆಗಳೊಂದಿಗೆ ಜಿಲ್ಲಾಡಳಿತ ಮಾತುಕತೆ ನಡೆಸಿ ಇತರ ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವಂತೆ ಮಾಡಬೇಕು.
►ಲಾಕ್ಡೌನ್ ಸಂದರ್ಭದಲ್ಲಿ ತುರ್ತು ಸೇವೆ ಮಾಡುವ ಸ್ವಯಂಸೇವಕರಿಗೆ ಪಾಸ್ ನೀಡಿ ಸಹಕರಿಸಬೇಕು.
►ಗ್ರಾಮ ಮಟ್ಟದಲ್ಲಿ ಕೋರೋನ ನಿಯಂತ್ರಣ ವ್ಯವಸ್ಥೆ ಮಾಡಬೇಕು
►ಜನಪ್ರತಿನಿಧಿಗಳು ಮತ್ತು ಸರಕಾರ ಇದರ ಬಗ್ಗೆ ಸಂಪೂರ್ಣ ಜವಾಬ್ದಾರಿ ನಿರ್ವಹಿಸುವುದು. ಎಲ್ಲರಿಗೂ ಸಮಾನವಾದ ಸೇವೆಗಳು ಸಿಗುವಂತೆ ಮಾಡಬೇಕು
►ಲಾಕ್ಡೌನ್ ಕಾರಣ ಕೆಲಸವಿಲ್ಲದೆ ದೈನಂದಿನ ಜೀವನ ನಡೆಸಲು ಸಾಧ್ಯವಾಗದೆ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಅವರ ಮನೆ ಬಾಗಿಲಿಗೆ ರೇಷನ್ ತಲುಪಿಸುವ ವ್ಯವಸ್ಥೆ ಸರ್ಕಾರ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ನಿಯೋಗದಲ್ಲಿ ಎಸ್ಸೆಸ್ಸೆಫ್ ದ.ಕ. ಜಿಲ್ಲಾದ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ, ಪ್ರ.ಕಾರ್ಯದರ್ಶಿ ಶರೀಫ್ ನಂದಾವರ, ಕೋಶಾಧಿಕಾರಿ ಮುಹಮ್ಮದ್ ಅಲಿ ತುರ್ಕಳಿಕೆ, ಕ್ಯಾಂಪಸ್ ಕಾರ್ಯದರ್ಶಿ ಎಂ.ಶರೀಫ್ ಬೆರ್ಕಳ, ಜಿಲ್ಲಾ ಬ್ಲಡ್ ಕನ್ವೀನರ್ ಕರೀಂ ಕದ್ಕಾರ್, ವೈಸ್ ಕನ್ವೀನರ್ ನವಾಝ್ ಸಖಾಫಿ ಅಡ್ಯಾರ್, ಉಳ್ಳಾಲ ಬ್ಲಡ್ ಉಸ್ತುವಾರಿ ಅಲ್ತಾಫ್ ಶಾಂತಿಬಾಗ್ ಉಪಸ್ಥಿತರಿದ್ದರು.