ಬೆಂಗಳೂರು, ದಕ್ಷಿಣ ಕನ್ನಡ, ಕಲಬುರಗಿ, ಧಾರವಾಡ ಜಿಲ್ಲೆಗಳ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿರ್ಬಂಧ
ಲಾಕ್ಡೌನ್
ಸಾಂದರ್ಭಿಕ ಚಿತ್ರ
ಬೆಂಗಳೂರು, ಜು.16: ರಾಜ್ಯ ಸರಕಾರವು ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಜು.14ರ ರಾತ್ರಿ 8 ಗಂಟೆಯಿಂದ 22ರ ಬೆಳಗ್ಗೆ 5 ಗಂಟೆಯವರೆಗೆ ಬೆಂಗಳೂರು ಪ್ರದೇಶ(ಬಿಬಿಎಂಪಿ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ)ದಲ್ಲಿ ಲಾಕ್ಡೌನ್ ಘೋಷಿಸಿದೆ. ಅದರನ್ವಯ ಬೆಂಗಳೂರು ಪ್ರದೇಶದಲ್ಲಿ ಎಲ್ಲ ಧಾರ್ಮಿಕ ಸ್ಥಳಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳನ್ನು ನಿರ್ಬಂಧಿಸಲಾಗಿದೆ.
ಅಲ್ಲದೇ, ದಕ್ಷಿಣ ಕನ್ನಡ, ಕಲಬುರಗಿ ಹಾಗೂ ಧಾರವಾಡ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಈಗಾಗಲೇ ಲಾಕ್ಡೌನ್ ಜಾರಿಗೆ ತಂದಿದ್ದು, ಶುಕ್ರವಾರದ ನಮಾಝ್ ಸೇರಿದಂತೆ ಸಾಮೂಹಿಕ ಪ್ರಾರ್ಥನೆಗಳನ್ನು ಜು.14ರ ರಾತ್ರಿ 8 ಗಂಟೆಯಿಂದ ಅನ್ವಯಿಸುವಂತೆ ನಿರ್ಬಂಧಿಸಲಾಗಿದೆ.
ಲಾಕ್ಡೌನ್ ಹಂತ 1ರ ಸಂದರ್ಭದಲ್ಲಿ ಜಾರಿಗೆ ತರಲಾಗಿದ್ದ ಮಾರ್ಗಸೂಚಿಗಳೆ ಈ ಸಂದರ್ಭದಲ್ಲಿಯೂ ಅನ್ವಯವಾಗಲಿವೆ. ಆದುದರಿಂದ, ದಕ್ಷಿಣ ಕನ್ನಡ, ಕಲಬುರ್ಗಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿನ ಎಲ್ಲ ವಕ್ಫ್ ಸಂಸ್ಥೆಗಳ ಆಡಳಿತ ಸಮಿತಿಗಳು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಬೇಕು ಎಂದು ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಸ್ಲಾಹುದ್ದೀನ್ ಗದ್ಯಾಲ್ ತಿಳಿಸಿದ್ದಾರೆ.