ವಿಜಯಪುರ: ಹೆರಿಗೆ ಆಸ್ಪತ್ರೆಯಲ್ಲಿ ಗರ್ಭಿಣಿ, ಮಗು ಮೃತ್ಯು: ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದ ಕುಟುಂಬಸ್ಥರು
ಸಾಂದರ್ಭಿಕ ಚಿತ್ರ
ವಿಜಯಪುರ, ಜು.18: ನಗರದ ಜಿಲ್ಲಾ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಗರ್ಭಿಣಿ ಮತ್ತು ಮಗು ಮೃತಪಟ್ಟ ಘಟನೆ ನಡೆದಿದ್ದು, ಹೆರಿಗೆ ಸಮಯದಲ್ಲಿ ವೈದ್ಯರ ನಿರ್ಲಕ್ಷಕ್ಕೆ ತಾಯಿ, ಮಗು ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಕವಿತಾ ಅಂಜುಟಗಿ ಸಾವನ್ನಪ್ಪಿದ ತಾಯಿ, ಜೊತೆಗೆ ಮಗು ಕೂಡ ಅಸುನೀಗಿದೆ.
ನಿನ್ನೆ ರಾತ್ರಿ ಮೃತ ಕವಿತಾ ಅವರ ಸಾಮಾನ್ಯ ಹೆರಿಗೆ ಆಗುತ್ತೆ ಎಂದು ವೈದ್ಯರು ಹೇಳಿದ್ದರು. ಆದರೆ, ತಡರಾತ್ರಿ ರಕ್ತ ತೆಗೆದುಕೊಂಡು ಬರಲು ವೈದ್ಯರು ಸೂಚಿಸಿದ್ದಾರೆ. ಆದರೆ ಏಕಾಏಕಿ ಬೆಳಗ್ಗೆ ತಾಯಿ ಮತ್ತು ಮಗುವಿನ ಸಾವಿನ ವಿಚಾರವನ್ನು ಪೋಷಕರಿಗೆ ವೈದ್ಯರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಪೋಷಕರು ಆರೋಪಿಸಿದ್ದು, ಆಸ್ಪತ್ರೆ ಎದುರು ಮೃತ ಮಹಿಳೆಯ ತಾಯಿ ಕಮಲಾಬಾಯಿ, ಪತಿ ಆನಂದ ಅಂಜುಟಗಿ ಕಣ್ಣೀರು ಹಾಕುತ್ತಾ ಪ್ರತಿಭಟನೆ ನಡೆಸಿದ್ದಾರೆ.
ಈ ಸಂಬಂಧ ವಿಜಯಪುರ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶರಣಪ್ಪ ಕಟ್ಟಿ ಪ್ರತಿಕ್ರಿಯೆ ನೀಡಿದ್ದು, ಮಹಿಳೆಗೆ ಇದು ಮೂರನೇ ಹೆರಿಗೆ. ಮೊದಲೆರಡು ಹೆರಿಗೆ ನಾರ್ಮಲ್ ಆಗಿದ್ದರಿಂದ ಇದೂ ಕೂಡಾ ನಾರ್ಮಲ್ ಆಗುತ್ತೆ ಎಂದು ವೈದ್ಯರು ಅಂದುಕೊಂಡಿದ್ದರು. ಬಳಿಕ ಆಪರೇಶನ್ ಕೇಂದ್ರಕ್ಕೆ ಕರೆದೊಯ್ಯುವ ವೇಳೆ ಗರ್ಭಿಣಿ ಕುಸಿದು ಬಿದ್ದಿದ್ದಾರೆ. ಬಳಿಕ ಸಿಝೇರಿಯನ್ ಮಾಡಿದ್ದಾರೆ. ಆದರೆ ತಾಯಿ ಜೊತೆ ಮಗು ಕೂಡಾ ಮೃತಪಟ್ಟಿದೆ. ಸಾಕಷ್ಟು ಪ್ರಯತ್ನಪಟ್ಟರೂ ಇಬ್ಬರನ್ನೂ ಉಳಿಸಿಕೊಳ್ಳಲಾಗಲಿಲ್ಲ. ಇದು ಬಹಳ ಖೇದಕರ" ಎಂದು ತಿಳಿಸಿದ್ದಾರೆ.