ಕಲಬುರಗಿ ಆಸ್ಪತ್ರೆಯಲ್ಲಿ ಹಂದಿಗಳ ಕಾಟ: ಬಿಜೆಪಿ ವಿರುದ್ಧ ಶಾಸಕ ಪ್ರಿಯಾಂಕ್ ಖರ್ಗೆ ವ್ಯಂಗ್ಯ
ಕಲಬುರಗಿ, ಜು.19: ಇಲ್ಲಿನ ಜಿಲ್ಲಾಸ್ಪತ್ರೆ ಆವರಣದಲ್ಲಿ ಹಂದಿಗಳ ತಾಣವಾಗಿರುವುದನ್ನು ರಾಜ್ಯ ಮತ್ತು ರಾಷ್ಟ್ರೀಯ ಮಾಧ್ಯಮಗಳ್ಲಿ ವರದಿಯಾಗಿರುವುದಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಸರಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಟಿವಿ ಚಾನೆಲ್ ನಲ್ಲಿ ಪ್ರಸಾರವಾದ ಸುದ್ದಿ ತುಣುಕೊಂದನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ಶಾಸಕರು, ಕಲ್ಯಾಣ ಕರ್ನಾಟಕವನ್ನು ರಾಷ್ಟ್ರೀಯ ಮಾದ್ಯಮದಲ್ಲಿ ಈ ರೀತಿ ಹೈಲೈಟ್ ಆಗುವಂತೆ ಮಾಡಿರುವುದಕ್ಕೆ ಬಿಜೆಪಿಗೆ 'ಅಭಿನಂದನೆ' ಎಂದು ವ್ಯಂಗ್ಯವಾಡಿದ್ದಾರೆ.
ತಮ್ಮ ಟ್ವೀಟ್ ನಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಶಾಸಕರು ದೇಶದಲ್ಲಿಯೇ ಮೊದಲ ಕೋವಿಡ್ ಸಾವು ವರದಿಯಾಗಿರುವುದು ಕಲಬುರಗಿ ಯಲ್ಲಿ. ಇಷ್ಟಾದರೂ ಕೂಡಾ ಆಸ್ಪತ್ರೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ಕೊಡದೆ ನಾವೆಲ್ಲ ಯಾವ ಪಾಠ ಕಲಿತಿದ್ದೇವೆ? ಬೇರೆಯವರಿಗೆ ಏನು ಸಂದೇಶ ರವಾನಿಸಿದ್ದೇವೆ? ಯಾವ 'ಸ್ಟಾಂಡರ್ಡ್ ಆಪರೇಷನ್ ಪ್ರೊಸಿಜರ್' ನಿಯಮ ಪಾಲನೆಯಾಗಿದೆ ? ಎಂದು ಪ್ರಶ್ನಿಸಿದ ಅವರು 'ಏನೂ ಆಗಿಲ್ಲ' ಎಂದು ಟೀಕಿಸಿದ್ದಾರೆ.
ಬಿಜೆಪಿ ಸರಕಾರ ಲಾಭ ಮಾಡಿಕೊಳ್ಳುವುದರಲ್ಲಿ ತೊಡಗಿಕೊಂಡಿದೆ ಎಂದು ಶಾಸಕರ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.