ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಸರಿಯಲ್ಲ: ಎಚ್.ವಿಶ್ವನಾಥ್
ಮೈಸೂರು, ಜು.28: ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಅಂಗೀಕಾರ ಮಾಡಿದ್ದು ಸರಿಯಲ್ಲ. ಈ ಬಗ್ಗೆ ವಿಸ್ತೃತ ಚರ್ಚೆಯಾಗಬೇಕಿತ್ತು ಎಂದು ವಿಧಾನ ಪರಿಷತ್ ಗೆ ನೇಮಕಗೊಂಡಿರುವ ಎಚ್.ವಿಶ್ವನಾಥ್ ಅಭಿಪ್ರಾಯಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ಸಾಹಿತ್ಯಕ-ಸಾಂಸ್ಕೃತಿಕ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಅಂಗೀಕಾರಗೊಳಿಸಿದ್ದಾರೆ. ಇದು ಸರಿಯಲ್ಲ ಇದಕ್ಕೂ ಮುನ್ನ ವಿಸ್ತೃತ ಚರ್ಚೆಯಾಗಬೇಕಿತ್ತು ಎಂದವರು ಹೇಳಿದ್ದಾರೆ.
2015 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭೂ ಸುಧಾರಣೆ ತಿದ್ದುಪಡಿ ಮಾಡಿದರು. ಇದನ್ನು ವಿರೋಧಿಸಿ ಇದರಿಂದಾಗುವ ದುಷ್ಪರಿಣಾಮದ ಕುರಿತು ' ಸಿರಿ ಭೂಮಿ' ಪುಸ್ತಕ ಬರೆದೆ. ಆಗ ಚರ್ಚೆಯಾಯಿತು. ನಂತರ ಅದನ್ನು ಸರಿಪಡಿಸುವ ಕಾರ್ಯ ಮಾಡಲಾಯಿತು. ಕಾಲ ಕಾಲಕ್ಕೆ ಬದಲಾವಣೆಯಾಗಬೇಕಿರುವುದು ಸಹಜ. ಹಾಗಂತ ಅನಾನೂಕೂಲ ಉಂಟಾಗುವ ಕಾಯ್ದೆಗಳು ಜಾರಿಯಾಗಬಾರದು. ಇಂತಹ ಕಾಯ್ದೆಗಳು ಅಂಗೀಕಾರಗೊಳ್ಳುವ ಮುನ್ನ ಚರ್ಚೆಯಾಗಬೇಕಿತ್ತು ಎಂದು ಹೇಳಿದರು.
ರಾಜ್ಯದಲ್ಲಿ ಕೈಗೊಂಡಿರುವ ಆನ್ ಲೈನ್ ಶಿಕ್ಷಣದ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಆನ್ ಲೈನ್ ಶಿಕ್ಷಣ ಬೇಡ ಎಂದು ಮಾಧ್ಯಮಗಳ ಮುಂದೆ ಹೇಳಿದ್ದೇನೆ. ಆನ್ ಲೈನ್ ಶಿಕ್ಷಣದಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ತೊಂದರೆತಾಗಲಿದೆ ಎಂದು ಹೇಳಿದರು.