ಐಪಿಎಸ್ ಅಧಿಕಾರಿ ಪಿ.ಎಸ್.ಸಂಧು ಸಿಐಡಿಯ ಡಿಜಿಪಿ ಹುದ್ದೆಗೆ ಭಡ್ತಿ
ಬೆಂಗಳೂರು, ಜು.30: ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಪಿ.ಎಸ್. ಸಂಧು ಅವರಿಗೆ ಸಿಐಡಿಯ ಡಿಜಿಪಿ ಹುದ್ದೆಗೆ ಭಡ್ತಿ ನೀಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಇನ್ನು, ಸಿಐಡಿಯ ಡಿಜಿಪಿಯಾಗಿದ್ದ ಎಸ್.ಎನ್. ಸಿದ್ದರಾಮಪ್ಪ ಅವರಿಗೆ ಕಿಯೋನಿಕ್ಸ್ ವ್ಯವಸ್ಥಾಪಕ ನಿದೇಶಕ ಹುದ್ದೆ ನೀಡಿ ವರ್ಗಾವಣೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
20 ಡಿವೈಎಸ್ಪಿಗಳಿಗೆ ಮುಂಭಡ್ತಿ: ರಾಜ್ಯ ಪೊಲೀಸ್ ಇಲಾಖೆಯ ಡಿವೈಎಸ್ಪಿ (ಸಿವಿಲ್) ಸೇವೆ ಸಲ್ಲಿಸುತ್ತಿರುವ 20 ಅಧಿಕಾರಿಗಳಿಗೆ ವೇತನ ಶ್ರೇಣಿ 70,850-1,07,100ರ ಎಸ್ಪಿ(ಸಿವಿಲ್) (ನಾನ್ ಐಪಿಎಸ್) ಸ್ನಾನಪನ್ನ ಮುಂಭಡ್ತಿ ನೀಡಿ ಖಾಲಿ ಇರುವ ಹುದ್ದೆಗಳಿಗೆ ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ ಎಂದು ವರದಿಯಾಗಿದೆ.
ರಾಜ್ಯ ಗುಪ್ತವಾರ್ತೆಯ ಎಸ್.ಟಿ.ಸಿದ್ದಲಿಂಗಪ್ಪ ಅವರನ್ನು ಸಕ್ಷಮ ಪ್ರಾಧಿಕಾರದಲ್ಲಿ ವರದಿ ಮಾಡಿಕೊಳ್ಳಬೇಕು. ಕರ್ನಾಟಕ ಲೋಕಾಯುಕ್ತ ಡಿವೈಎಸ್ಪಿ ಆಗಿದ್ದ ರಾಜೇಂದ್ರ ಆರ್.ಅಂಬಡಗಟ್ಟಿ ಅವರನ್ನು ಬೆಳಗಾವಿಯ ಲೋಕಾಯುಕ್ತ ಎಸ್ಪಿಯನ್ನಾಗಿ ನೇಮಕ ಮಾಡಲಾಗಿದೆ. ಅದೇ ರೀತಿ, ಇನ್ನಿತರ ಅಧಿಕಾರಿಗಳನ್ನು ಮುಂಭಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.