ಹೊಂದಾಣಿಕೆ ರಾಜಕಾರಣ ಮಾಡಿದ್ದರೆ ಬಿಜೆಪಿ ಬೆಳೆಯುತ್ತಿರಲಿಲ್ಲ: ಸಚಿವ ಸಿ.ಟಿ.ರವಿ
ಚಿಕ್ಕಮಗಳೂರು, ಆ.1: ಪಂಚಾಯತ್ ನಿಂದ ಪಾರ್ಲಿಮೆಂಟ್ ವರೆಗೂ ಪಕ್ಷವನ್ನು ಬಲಿಷ್ಠಗೊಳಿಸಿದ್ದೇವೆ. ಹೊಂದಾಣಿಕೆ ರಾಜಕೀಯ ನಮ್ಮ ಜಿಲ್ಲೆಗೆ ಅನ್ವಯವಾಗುವುದಿಲ್ಲ. ಯೋಗೇಶ್ವರ್ ಅವರೇ ನಮ್ಮ ಜಿಲ್ಲೆಗೆ ಬನ್ನಿ, ಪಂಚಾಯತ್ ನಿಂದ ಪಾರ್ಲಿಮೆಂಟ್ ವರೆಗೂ ಬಿಜೆಪಿ ಇದೆ. ಹಾಗೇ ರಾಮನಗರದಲ್ಲೂ ನೀವು ಪಂಚಾಯತ್ ನಿಂದ ಪಾರ್ಲಿಮೆಂಟ್ ವರೆಗೂ ಬಿಜೆಪಿ ಕಟ್ಟಿ ಎಂದು ಸಚಿವ ಸಿ.ಟಿ.ರವಿ ಸಲಹೆ ನೀಡಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷ ಬಹುತೇಕ ಕ್ಷೇತ್ರಗಳಲ್ಲಿ ಅಧಿಕಾರದಲ್ಲಿದೆ. ಹೊಂದಾಣಿಕೆ ರಾಜಕಾರಣ ಮಾಡಿದ್ದರೆ ಬಿಜೆಪಿ ಬೆಳೆಯುತ್ತಿರಲಿಲ್ಲ ಎಂದ ಅವರು, ಎಲ್ಲಿ ಪಂಚಾಯತ್ ನಿಂದ ಪಾರ್ಲಿಮೆಂಟ್ ವರೆಗೂ ಬಿಜೆಪಿ ಪಕ್ಷ ಅಧಿಕಾರದಲ್ಲಿಲ್ಲವೋ ಅಲ್ಲಿ ಅದು ಅವರಿಗೆ ಅಪ್ಲೇ ಆಗುತ್ತೆ ಎಂದ ಅವರು, ಪಕ್ಷದ ಹಿರಿಯ ನಾಯಕರು ಹೊಂದಾಣಿಕೆ ರಾಜಕೀಯ ಸಹಿಸಿಕೊಳ್ಳುವುದಿಲ್ಲ, ಪಕ್ಷ ರಾಜಕೀಯ ಮಾಡಬೇಕು. ಕೆಲವರು ವ್ಯಕ್ತಿಗತ ಹಿತಾಸಕ್ತಿಗಾಗಿ ಹೊಂದಾಣಿಕೆ ರಾಜಕೀಯ ಮಾಡಿಕೊಂಡಿರಬಹುದು. ಇದನ್ನು ಪಕ್ಷ ಗಂಭೀರವಾಗಿ ಪರಿಗಣಿಸುತ್ತದೆ ಎಂದರು.
ಯಾರು ಯಾವಾಗ ಎಲ್ಲೆಲ್ಲಿ ಕಾಲಿಗೆ ಬಿದ್ದಿದ್ದಾರೋ ಗೊತ್ತಿಲ್ಲ, ರಾಜಕೀಯಕ್ಕಾಗಿ ಕಾಲು ಹಿಡಿಯುವುದು ತಪ್ಪು. ಆದರೆ, ಹಿರಿತನದ ಸಂಸ್ಕಾರದಿಂದ ಕಾಲಿಗೆ ಬೀಳುವುದು ನಮ್ಮ ಸಂಸ್ಕೃತಿಯಾಗಿದ್ದು, ಅದು ತಪ್ಪಲ್ಲ. ಇದನ್ನು ರಾಜಕೀಯ ಮೇಲಾಟಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದರು.