ಹಿರಿಯ ಪತ್ರಕರ್ತ ಕೆ.ಎಂ.ಹಾಲಪ್ಪ ನಿಧನ
ಬೆಂಗಳೂರು, ಆ.3: ಸಂಜೆವಾಣಿ, ಈ ಸಂಜೆ ಸೇರಿ ಹಲವು ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದ ಹಿರಿಯ ಪತ್ರಕರ್ತ ಕೆ.ಎಂ.ಹಾಲಪ್ಪ(65) ಕೊರೋನ ಸೋಂಕಿನಿಂದಾಗಿ ಸೋಮವಾರ ಮೃತಪಟ್ಟಿದ್ದಾರೆ.
ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆ ಕಳೆದ ಜು.26ರಂದು ದೇವನಹಳ್ಳಿ ಬಳಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಬೆಳಗ್ಗೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರು ಎಳೆದಿದ್ದಾರೆ.
ಸುಮಾರು 3 ದಶಕಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸಿದ್ದ ಹಾಲಪ್ಪ ಅವರು, ಪತ್ನಿ, ಪುತ್ರ, ಸೊಸೆ, ಮೊಮ್ಮಕ್ಕಳನ್ನು ಅಗಲಿದ್ದಾರೆ.
ರೈತ ಹೋರಾಟ ಸೇರಿ ಇನ್ನಿತರ ಜನಪರ ಹೋರಾಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಹಾಲಪ್ಪ ಅವರು ಮೂಲತಃ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಬೆಳಗುಂಬ ಗ್ರಾಮದವರು. ಅವರ ನಿಧನಕ್ಕೆ ವಿವಿಧ ಪತ್ರಕರ್ತ ಸಂಘಟನೆಗಳು, ಹಿರಿಯ ಪತ್ರಕರ್ತರು ಸೇರಿ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
Next Story