ಭಾರೀ ಮಳೆ ಸಾಧ್ಯತೆ: ಕರಾವಳಿಯ ಮೂರು ಜಿಲ್ಲೆಗಳಲ್ಲಿ 'ರೆಡ್ ಅಲರ್ಟ್'
ಬೆಂಗಳೂರು, ಆ.4: ರಾಜ್ಯದ ಕರಾವಳಿ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಆ.5ರಿಂದ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಮಾನ ಇಲಾಖೆ 'ರೆಡ್ ಅಲರ್ಟ್' ಘೋಷಿಸಿದೆ.
ಅಲ್ಲದೆ ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆ.9ರವರೆಗೆ ಧಾರಾಕಾರ ಮಳೆಯಾಗುವ ನಿರೀಕ್ಷೆ ಇರುವುದರಿಂದ ಐದು ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಎಲ್ಲೆಲ್ಲಿ ಎಷ್ಟು ಮಳೆ: ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಗರಿಷ್ಠ 21 ಸೆಂ.ಮೀ. ಕೊಲ್ಲೂರು 20 ಸೆಂ.ಮೀ, ಭಾಗಮಂಡಲ 19 ಸೆಂ.ಮೀ, ಕಮ್ಮರಡಿ 17 ಸೆಂ.ಮೀ, ಸಿದ್ದಾಪುರ 15 ಸೆಂ.ಮೀ, ಆಗುಂಬೆ 14 ಸೆಂ.ಮೀ, ಅಂಕೋಲಾ, ಕದ್ರಾ, ಹುಂಚದಕಟ್ಟೆ ತಲಾ 12 ಸೆಂ.ಮೀ, ತೀರ್ಥಹಳ್ಳಿ 10 ಸೆಂ.ಮೀ, ಧರ್ಮಸ್ಥಳ, ಕಾರ್ಕಳ, ಹೊನ್ನಾವರ 8 ಸೆಂ.ಮೀ, ಸುಳ್ಯ, ಕುಂದಾಪುರ, ಶೃಂಗೇರಿ 7 ಸೆಂ.ಮೀ, ಪುತ್ತೂರು, ಉಪ್ಪಿನಂಗಡಿ 6 ಸೆಂ.ಮೀ, ಮೂಡುಬಿದರೆ, ಉಡುಪಿ, ಬೆಳಗಾವಿ 5 ಸೆಂ.ಮೀ ಬಾಳೆಹೊನ್ನೂರು 4 ಸೆಂ.ಮೀ, ಮಂಗಳೂರು, ಶಿವಮೊಗ್ಗ, ಹಾಸನ 3 ಸೆಂ.ಮೀ, ನಿಪ್ಪಾಣಿ 2 ಸೆಂ.ಮೀ, ಚಿಕ್ಕಮಗಳೂರು, ಮಡಿಕೇರಿ, ಮಲೆಮಹದೇಶ್ವರ ಬೆಟ್ಟ, ಕಡೂರಿನಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.
ಕಡಲಿಗೆ ಇಳಿಯದಂತೆ ಎಚ್ಚರಿಕೆ
ಕರಾವಳಿ ಭಾಗದಲ್ಲಿ ಗಂಟೆಗೆ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಗರಿಷ್ಠ 4.1 ಮೀಟರ್ ಗಳಷ್ಟು ಎತ್ತರದ ಅಲೆಗಳು ಏಳುವ ಸಾಧ್ಯತೆ ಇರುವುದರಿಂದ ಮೀನುಗಾರರು ಆ.4ರಂದು ಕಡಲಿಗೆ ಇಳಿಯಬಾರದು ಎಂದು ಎಚ್ಚರಿಕೆ ನೀಡಿದೆ.