ಸಿದ್ದರಾಮಯ್ಯ ಆರೋಗ್ಯಕ್ಕಾಗಿ ಝಮೀರ್ ಅಹ್ಮದ್ ಪ್ರಾರ್ಥನೆ
ಬೆಂಗಳೂರು, ಆ.6: ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶೀಘ್ರ ಗುಣಮುಖರಾಗುವಂತೆ ಹಾರೈಸಿ ದರ್ಗಾದಲ್ಲಿ ಮಾಜಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಪ್ರಾರ್ಥನೆ ಸಲ್ಲಿಸಿದರು.
ಗುರುವಾರದ ನಗರದ ಅಕ್ಕಿಪೇಟೆಯಲ್ಲಿರುವ ಹಝ್ರತ್ ತವಕ್ಕಲ್ ಮಸ್ತಾನ್ ಷಾ ದರ್ಗಾದಲ್ಲಿ ಸಿದ್ದರಾಮಯ್ಯ ಅವರ ಆರೋಗ್ಯಕ್ಕಾಗಿ ವಿಶೇಷ ಪ್ರಾರ್ಥನೆ ನೆರವೇರಿಸಿದ ಝಮೀರ್ ಅಹ್ಮದ್ ಖಾನ್, ಬಡವರಿಗೆ ಅನ್ನದಾನವನ್ನು ಮಾಡಿದರು.
ಅನ್ನಭಾಗ್ಯದ ಮೂಲಕ ಕೋಟ್ಯಂತರ ಜನರ ಹಸಿವು ನೀಗಿಸಿದ ಮಾತೃಹೃದಯದ ಸಿದ್ದರಾಮಯ್ಯ ಅವರು ದೇವರ ದಯೆ, ನಾಡಿನ ಜನರ ಹಾರೈಕೆ ಮತ್ತು ನನ್ನೊಂದಿಗೆ ಇಂದು ದರ್ಗಾಕ್ಕೆ ಆಗಮಿಸಿ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದ ಸಾವಿರಾರು ಮಂದಿಯ ಪ್ರಾರ್ಥನೆಯಿಂದ ಶೀಘ್ರ ಗುಣಮುಖರಾಗಿ, ಸಕ್ರಿಯ ರಾಜಕಾರಣದಲ್ಲಿ ತೊಡಗುತ್ತಾರೆಂಬ ವಿಶ್ವಾಸವಿದೆ ಎಂದು ಝಮೀರ್ ಅಹ್ಮದ್ ಖಾನ್ ಸುದ್ದಿಗಾರರಿಗೆ ತಿಳಿಸಿದರು.
ನನ್ನ ಮಾರ್ಗದರ್ಶಿಯಾದ ಸಿದ್ದರಾಮಯ್ಯರಿಗೆ ಕೊರೋನ ಸೋಂಕು ತಗುಲಿರುವ ಸುದ್ದಿ ಕೇಳಿ ತುಂಬಾ ನೋವುಂಟಾಯಿತು. ಆದುದರಿಂದ, ಇವತ್ತು ಈ ಪವಿತ್ರ ದರ್ಗಾಕ್ಕೆ ಭೇಟಿ ನೀಡಿ, ಸಿದ್ದರಾಮಯ್ಯ ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸಿ, ಎರಡು ಸಾವಿರ ಜನರಿಗೆ ಮಧ್ಯಾಹ್ನದ ಊಟ ವಿತರಿಸಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಜಿ.ಎ.ಬಾವಾ, ಬಿ.ಕೆ.ಅಲ್ತಾಫ್ ಖಾನ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.