ನಾವಿಕನಿಲ್ಲದ ದೋಣಿಯಂತಾದ ಕರ್ನಾಟಕ: ದಿನೇಶ್ ಗುಂಡೂರಾವ್
'ರಾಜ್ಯದ ಜನರನ್ನು ದೇವರೇ ಕಾಪಾಡಬೇಕು'
ಬೆಂಗಳೂರು, ಆ. 7: `ಕರ್ನಾಟಕ ರಾಜ್ಯ ಇದೀಗ ನಾವಿಕನಿಲ್ಲದ ದೋಣಿಯಂತಾಗಿದೆ. ರಾಜ್ಯದ ಜನರನ್ನು ಆ ದೇವರೇ ಕಾಪಾಡಬೇಕು' ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಮಾಜಿ ಅಧ್ಯಕ್ಷ ಹಾಗೂ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ದಿನೇಶ್ ಗುಂಡೂರಾವ್, ರಾಜ್ಯ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಟ್ವೀಟ್ ಮಾಡಿರುವ ಅವರು, 'ರಾಜ್ಯ ಸರಕಾರ ಇತಿಹಾಸದಿಂದ ಪಾಠ ಕಲಿಯಬೇಕಿತ್ತು. ಕೇವಲ 1 ವರ್ಷದ ಹಿಂದೆ ಸುರಿದ ಅಬ್ಬರದ ಮಳೆ ಮಾಡಿದ ಅನಾಹುತ ಸರಕಾರ ನಡೆಸುವವರ ಗಮನದಲ್ಲಿರಬೇಕಿತ್ತು ಎಂದು ಇದೇ ಸಂದರ್ಭದಲ್ಲಿ ಎಚ್ಚರಿಸಿದ್ದಾರೆ.
ಆದರೆ, ರಾಜ್ಯದ ಜನರ ದುರದೃಷ್ಟ, ಮಹಾಮಾರಿ ಕೊರೋನ ಸೋಂಕಿನ ಕಂಟಕದ ಮಧ್ಯೆಯೆ ಪ್ರವಾಹ ಜನರನ್ನು ಬೀದಿಗೆ ತಂದು ನಿಲ್ಲಿಸಿದೆ. ದುರಂತವೆಂದರೆ ಈಗ ರಾಜ್ಯ ನಾವಿಕನಿಲ್ಲದ ದೋಣಿಯಂತಾಗಿದೆ. ರಾಜ್ಯದ ಜನರನ್ನು ಆ ದೇವರೇ ಕಾಪಾಡಬೇಕು' ಎಂದು ಆಕ್ರೋಶ ವ್ಯಕ್ತಪಡಿಸಿರುವ ದಿನೇಶ್ ಗುಂಡೂರಾವ್, ಸರಕಾರ ಕೂಡಲೇ ಎಚ್ಚತ್ತುಕೊಳ್ಳಬೇಕು ಎಂದು ಸಲಹೆ ಮಾಡಿದ್ದಾರೆ.
ರಾಜ್ಯದಲ್ಲಿ ಕೊರೋನ ಸೋಂಕು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ರಾಜ್ಯ ಸರಕಾರಕ್ಕೆ ಇದೀಗ ಪ್ರವಾಹವೂ ಸವಾಲಾಗಿದೆ. ಕಳೆದ ಬಾರಿ ಸರಕಾರ ಸಮರ್ಪಕ ಪ್ರವಾಹ ಪರಿಹಾರ, ಜನರಿಗೆ ರಕ್ಷಣೆ ನೀಡುವಲ್ಲಿ ಸೋತಿದೆ. ಇದೀಗ ಮತ್ತೆ ಅಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರಾಜ್ಯ ಸರಕಾರದ ವೈಫಲ್ಯದ ವಿರುದ್ಧ ದಿನೇಶ್ ಗುಂಡೂರಾವ್ ದೂರಿದ್ದಾರೆ.