ಕೆಪಿಎಸ್ಸಿ ಪರೀಕ್ಷೆ ಮುಂದೂಡುವಂತೆ ಸಿದ್ದರಾಮಯ್ಯ ಆಗ್ರಹ
ಬೆಂಗಳೂರು, ಆ.10: ಕೊರೋನ ಸೋಂಕಿನ ಹಿನ್ನಲೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷ ಎಲ್ಲ ನೇಮಕಾತಿ ಹುದ್ದೆಗಳ ಭರ್ತಿಯನ್ನು ತಡೆಹಿಡಿಯಬೇಕೆಂದು ಸರಕಾರದ ಸುತ್ತೋಲೆಯ ಹೊರತಾಗಿಯೂ ಕೆಪಿಎಸ್ಸಿ ತರಾತುರಿಯಲ್ಲಿ ಕೆಎಎಸ್ ಪೂರ್ವಭಾವಿ ಪರೀಕ್ಷೆ ನಡೆಸಲು ಹೊರಟಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ರಾಜ್ಯದ 6 ಜಿಲ್ಲೆಗಳಲ್ಲಿ ಮಾತ್ರ ಕೆಪಿಎಸ್ಸಿ ಪರೀಕ್ಷಾ ಕೇಂದ್ರಗಳಿವೆ. ಕೊರೋನ ಸೋಂಕಿನ ಈ ದಿನಗಳಲ್ಲಿ 30 ಜಿಲ್ಲೆಗಳ ಅಭ್ಯರ್ಥಿಗಳ ಪ್ರಯಾಣ ಮತ್ತು ವಾಸ್ತವ್ಯ ಬಹಳ ಅಪಾಯಕಾರಿ. ಈ ಎಲ್ಲ ಅಂಶಗಳನ್ನು ಗಮನಿಸಿ, ಕೆಪಿಎಸ್ಸಿ ನಡೆಸುವ ಆ.24ರ ಪರೀಕ್ಷೆಯನ್ನು ಮುಂದೂಡಬೇಕೆಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಕೆಪಿಎಸ್ಸಿ ಪರೀಕ್ಷೆಯ ಅಭ್ಯರ್ಥಿಗಳಲ್ಲಿ ಶೇ.20ರಷ್ಟು ಸರಕಾರಿ ನೌಕರರಿದ್ದಾರೆ. ಇವರೆಲ್ಲ ಕಡ್ಡಾಯ ಕೊರೋನ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಯಾರಿಗಾದರೂ ಕೊರೋನ ಸೋಂಕಿದ್ದರೆ ಉಳಿದವರಿಗೂ ಹರಡುವ ಸಾಧ್ಯತೆ ಇಲ್ಲವೇ? ಮುಖ್ಯಮಂತ್ರಿ ಯಡಿಯೂರಪ್ಪ ತಕ್ಷಣ ಗಮನ ಹರಿಸಿ ಕೆಪಿಎಸ್ಸಿ ಪರೀಕ್ಷೆ ಮುಂದೂಡಬೇಕು ಎಂದು ಅವರು ಆಗ್ರಹಿಸಿದ್ದಾರೆ.