ಅಸದುದ್ದೀನ್ ಓವೈಸಿಯದ್ದು ಹಿಂದೂ ವಿರೋಧಿ ರಕ್ತ: ಸಚಿವ ಈಶ್ವರಪ್ಪ
ಶಿವಮೊಗ್ಗ, ಆ.11: ನನ್ನ ಹೇಳಿಕೆಯನ್ನು ಅಸದುದ್ದೀನ್ ಓವೈಸಿ ರಾಜಕೀಯವಾಗಿ ತಿರುಗಿಸಿದ್ದಾರೆ. ಈಶ್ವರಪ್ಪ ಆರೆಸ್ಸೆಸ್ ಪ್ರೇರಣೆಯಂತೆ ಹೇಳಿಕೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಮುಂದೆ ಧರ್ಮ ಸಂಸತ್ ಹಾಗೂ ಬಿಜೆಪಿಯಲ್ಲೂ ಈ ಬಗ್ಗೆ ನಿರ್ಣಯವಾಗುತ್ತದೆ ಎಂದಿದ್ದಾರೆ. ನಾನು ಈ ದೇಶದ ಮಣ್ಣಿನ ಮಗ. ಸ್ವಾತಂತ್ರ್ಯ ಭಾರತದಲ್ಲಿದ್ದು, ನನ್ನ ಭಾವನೆ ಹೇಳಿದ್ದೇನೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.
ನಗರದಲ್ಲಿಂದು ಮಾತನಾಡಿದ ಅವರು, ಸಂಸದ ಅಸಾದುದ್ದೀನ್ ಓವೈಸಿಯವರದ್ದು ಹಿಂದೂ ವಿರೋಧಿ ರಕ್ತ. ಅವರಿಗೆ ಹಿಂದೂ ಶ್ರದ್ಧಾ ಕೇಂದ್ರಗಳ ಬಗ್ಗೆ ಅವರಿಗೆ ಕಿಂಚಿತ್ತೂ ಉತ್ತಮ ಭಾವನೆ ಇಲ್ಲ ಎಂದು ಕಿಡಿಕಾರಿದರು.
ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಶಿಲಾನ್ಯಾಸ ಮಾಡಿದ್ದಕ್ಕೆ ದೇಶವೇ ಸಂತಸಪಟ್ಟಿದೆ. ಅ ದಿನದಂದು ನನ್ನ ಮನಸ್ಸಿನ ಭಾವನೆಗಳನ್ನು ನಿಮ್ಮ ಮುಂದೆ ಹಂಚಿಕೊಂಡಿದ್ದೇನೆ. ಕಾಶಿಗೆ ಹೋದಾಗ ವಿಶ್ವನಾಥನ ಹಾಗೂ ಮಥುರಾಕ್ಕೆ ಹೋದಾಗ ಕೃಷ್ಣನ ದೇವಾಲಯ ಒಡೆದು ಮಸೀದಿ ಕಟ್ಟಿದ್ದನ್ನು ನೋಡಿದ್ದೇನೆ. ಅದಕ್ಕೆ ನನ್ನ ಮನಸ್ಸಿಗೆ ನೋವಾಯ್ತು. ಜೊತೆಗೆ ಆಕ್ರೋಶವು ಸಹ ಬಂತು ಎಂದು ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಅದು ಕಟ್ಟಡ, ರಸ್ತೆ, ಚರಂಡಿ ನಿರ್ಮಾಣಕ್ಕೆ ಅಷ್ಟೇ ಅಲ್ಲ. ನಮ್ಮ ಸ್ವಾಭಿಮಾನದ ಶ್ರದ್ಧಾ ಕೇಂದ್ರಗಳಿಗೆ ಮುಕ್ತಿ ಸಿಗಬೇಕು. ಆಗ ಮಾತ್ರ ಸ್ವಾತಂತ್ರ್ಯ ಸಿಕ್ಕಂತೆ. ಕಾಶಿ ಹಾಗೂ ಮಥುರಾದಲ್ಲಿ ಮುಕ್ತವಾದ ಮಂದಿರವನ್ನು ನಿರ್ಮಾಣವಾಗಬೇಕು ಎಂಬುದು ನನ್ನ ಭಾವನೆ. ಅದೇ ಕಾರಣಕ್ಕೆ ನನ್ನ ಭಾವನೆಯನ್ನು ನಾನು ಬಹಿರಂಗವಾಗಿ ವ್ಯಕ್ತಪಡಿಸಿದ್ದೇನೆ ಎಂದು ಈಶ್ವರಪ್ಪ ಹೇಳಿದರು.