ಪಾಸಿಟಿವ್ ಸುದ್ದಿ: ರಾಜ್ಯದಲ್ಲಿ ಕೊರೋನ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಒಂದು ಲಕ್ಷಕ್ಕೂ ಅಧಿಕ
ಇಂದು 6,257 ಮಂದಿಗೆ ಸೋಂಕು ದೃಢ; 86 ಮಂದಿ ಸಾವು
ಬೆಂಗಳೂರು, ಆ.11: ರಾಜ್ಯದಲ್ಲಿ ಮಹಾಮಾರಿ ಕೊರೋನ ಸೋಂಕು ಆತಂಕಕಾರಿ ಸ್ಥಿತಿಯಲ್ಲಿ ಏರುತ್ತಿರುವ ನಡುವೆಯೂ ಸೋಂಕಿನಿಂದ ಗುಣಮುಖರಾದವರ ಸಂಖ್ಯೆಯಲ್ಲೂ ಏರಿಕೆ ಕಂಡಿದ್ದು, ಇಂದು ಒಂದು ಲಕ್ಷದ ಗಡಿ ದಾಟಿದೆ. ರಾಜ್ಯದಲ್ಲೀಗ ಸುಮಾರು 80 ಸಾವಿರದಷ್ಟು ಸಕ್ರಿಯ ಪ್ರಕರಣಗಳಿವೆ.
ಸೋಮವಾರ ಸಂಜೆಯಿಂದ ಮಂಗಳವಾರ ಸಂಜೆವರೆಗೆ ಮತ್ತೆ 6,257 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 1,88,611 ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 86 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 3398ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದೇ ದಿನ 17 ಮಂದಿ ಮತ್ತು ಮೈಸೂರಿನಲ್ಲಿ 11 ಮಂದಿ ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ಉಳಿದಂತೆ ಧಾರವಾಡ 9, ದಕ್ಷಿಣ ಕನ್ನಡ 9, ದಾವಣಗೆರೆ 4, ಬೆಳಗಾವಿ 4, ಬಳ್ಳಾರಿ 4, ಚಿಕ್ಕಮಗಳೂರು 3, ಕೊಪ್ಪಳ 3, ಹಾಸನ 3, ಹಾವೇರಿ 3, ಚಿಕ್ಕಬಳ್ಳಾಪುರ 2, ಗದಗ 2, ಬೀದರ್ 2, ವಿಜಯಪುರ 2, ಮಂಡ್ಯ 2, ರಾಯಚೂರು 2, ಬಾಗಲಕೋಟೆ, ಕಲಬುರಗಿ, ಚಾಮರಾಜನಗರ ಮತ್ತು ತುಮಕೂರು ಜಿಲ್ಲೆಯಲ್ಲಿ ತಲಾ ಒಂದು ಸಾವು ಸಂಭವಿಸಿದೆ.
ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 1610, ಬಳ್ಳಾರಿ 736, ಬೆಳಗಾವಿ 575, ಧಾರವಾಡ 276, ದಕ್ಷಿಣ ಕನ್ನಡ 243, ಮೈಸೂರು 238, ಉಡುಪಿ 219, ರಾಯಚೂರು 201, ಶಿವಮೊಗ್ಗ 189, ದಾವಣಗೆರೆ 172, ಕೊಪ್ಪಳ 169, ಕಲಬುರಗಿ 156, ಹಾಸನ 146, ಮಂಡ್ಯ 141, ಬಾಗಲಕೋಟೆ 135, ವಿಜಯಪುರ 121, ಯಾದಗಿರಿ 102, ರಾಮನಗರ 96, ಚಿಕ್ಕಮಗಳೂರು 93, ತುಮಕೂರು 89, ಗದಗ 78, ಬೀದರ್ 73, ಉತ್ತರ ಕನ್ನಡ 73, ಚಾಮರಾಜನಗರ 72, ಕೋಲಾರ 69, ಚಿತ್ರದುರ್ಗ 47, ಕೊಡಗು 41, ಹಾವೇರಿ 36, ಚಿಕ್ಕಬಳ್ಳಾಪುರ 33, ಬೆಂಗಳೂರು ಗ್ರಾಮಾಂತರದಲ್ಲಿ 28 ಪ್ರಕರಣಗಳು ಪಾಸಿಟಿವ್ ಬಂದಿದೆ.
ಒಟ್ಟಾರೆ ರಾಜ್ಯದಲ್ಲಿ 1,88,611 ಕೊರೋನ ಸೋಂಕಿತರ ಪೈಕಿ 1,05,599 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 6473 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 3398 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 79,606 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.