ಕೆಎಸ್ಆರ್ಟಿಸಿಯಿಂದ ಕೊರಿಯರ್ ಸೇವೆ ಆರಂಭಕ್ಕೆ ಚಿಂತನೆ
ಬೆಂಗಳೂರು, ಆ.11: ಕೊರೋನ ಸಂಕಷ್ಟದ ಸಂದರ್ಭದಲ್ಲಿ ನಷ್ಟಕ್ಕೆ ಸಿಲುಕಿರುವ ಸಾರಿಗೆ ಸಂಸ್ಥೆಗಳು, ಇದರಿಂದ ಪಾರಾಗಲು ಕೊರಿಯರ್ ಸೇವೆ ಆರಂಭಿಸುವ ಚಿಂತನೆ ನಡೆಸಿದ್ದು, ಅದರಿಂದ ವಾರ್ಷಿಕ 100 ಕೋಟಿ ವರಮಾನ ಸಂಗ್ರಹಿಸುವ ಗುರಿ ಹೊಂದಲಾಗಿದೆ.
ಕೊರೋನ ಸಂಕಷ್ಟ ಶುರುವಾದ ಬಳಿಕ ಸರಕಾರ ಲಾಕ್ಡೌನ್ ಘೋಷಣೆ ಮಾಡಲಾಯಿತು. ಬಳಿಕ ಲಾಕ್ಡೌನ್ ತೆರವುಗೊಳಿಸಿದ ನಂತರ ಬಸ್ ಸಂಚಾರ ಆರಂಭವಾದರೂ ಜನರು ಬಸ್ಗಳಲ್ಲಿ ಸಂಚಾರ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಸಾರಿಗೆ ಸಂಸ್ಥೆಗಳು ಸುಮಾರು 3 ಸಾವಿರ ಕೋಟಿಯಷ್ಟು ನಷ್ಟದಲ್ಲಿವೆ.
ಸಾರಿಗೆ ಸಂಸ್ಥೆಗಳು ನಷ್ಟದಿಂದ ಮೇಲೆದ್ದು ಬರಲು ಹಲವು ದಾರಿಗಳನ್ನು ಹುಡುಕುತ್ತಿವೆ. ಪ್ರತಿ ಹಳ್ಳಿಗೂ ತಲುಪುವ ಸಾಮರ್ಥ್ಯ ಹೊಂದಿರುವ ಕೆಎಸ್ಆರ್ಟಿಸಿ, ಉಳಿದ ಮೂರು ಸಂಸ್ಥೆಗಳ (ಬಿಎಂಟಿಸಿ, ಎನ್ಡಬ್ಲ್ಯುಕೆಆರ್ಟಿಸಿ, ಎನ್ಇಕೆಆರ್ಟಿಸಿ) ಜತೆಗೂಡಿ ಕೊರಿಯರ್ ಸೇವೆ ಒದಗಿಸಲು ಸಜ್ಜಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸದ್ಯದಲ್ಲೇ ಕೊರಿಯರ್ ಸೇವೆಗೆ ಚಾಲನೆ ಸಿಗಲಿದೆ.
ಹೊರ ರಾಜ್ಯಗಳಲ್ಲಿ ಸಾರಿಗೆ ಸಂಸ್ಥೆಗಳು ನಡೆಸುತ್ತಿರುವ ಕೊರಿಯರ್ ಸೇವೆಗಳ ಬಗ್ಗೆ ಅಧಿಕಾರಿಗಳ ತಂಡ ಅಧ್ಯಯನ ನಡೆಸಿ ವರದಿ ನೀಡಿದೆ. ಅದನ್ನು ಆಧರಿಸಿ ತೆಲಂಗಾಣ ಮಾದರಿ ಅನುಸರಿಸಲು ನಿರ್ಧರಿಸಲಾಗಿದೆ.
ಹೊರ ಗುತ್ತಿಗೆ: ನಾಲ್ಕು ನಿಗಮಗಳ ವಾಹನಗಳು ಮತ್ತು ಮೂಲ ಸೌಕರ್ಯಗಳನ್ನು ಈ ಸೇವೆಗೆ ಬಳಕೆ ಮಾಡಿಕೊಳ್ಳಲಿದೆ. ಆದರೆ, ಸಿಬ್ಬಂದಿ ಜತೆಗೆ ನಿರ್ವಹಣೆ ಜವಾಬ್ದಾರಿಯನ್ನು ಹೊರ ಗುತ್ತಿಗೆ ನೀಡಲಾಗಿದೆ. ಟೆಂಡರ್ ಪ್ರಕ್ರಿಯೆ ನಡೆಸಿ ಚಾಂಪಿಯನ್ ಗ್ರೂಪ್ ಎಂಬ ಸಂಸ್ಥೆಗೆ ಈ ಜವಾಬ್ದಾರಿ ವಹಿಸಲಾಗಿದೆ.
ಕೊರಿಯರ್ ಸೇವೆ ನಿರ್ವಹಿಸುವ ಈ ಸಂಸ್ಥೆಗೆ ಶೇ 17.5ರಷ್ಟು ಕಮಿಷನ್ ನೀಡಲು ನಿರ್ಧರಿಸಲಾಗಿದೆ. ಗೋದಾಮು ನಿರ್ಮಿಸಿಕೊಳ್ಳುವ ಜವಾಬ್ದಾರಿಯೂ ಆ ಸಂಸ್ಥೆಗೆ ಇದೆ. ಜಾಗಕ್ಕೆ ಬಾಡಿಗೆಯನ್ನೂ ಪಾವತಿಸಲಾಗುವುದು ಎಂದು ಕೆಎಸ್ಸಾರ್ಟಿಸಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೊರಿಯರ್ ಸೇವೆಯ ವಹಿವಾಟಿನ ಹಣಕಾಸಿನ ಸಂಪೂರ್ಣ ಹಿಡಿತ ಕೆಎಸ್ಆರ್ಟಿಸಿಯಲ್ಲೇ ಇರಲಿದೆ. ಅದಕ್ಕಾಗಿಯೇ ಸಾಫ್ಟ್ವೇರ್ ಕೂಡ ಸಿದ್ಧಗೊಂಡಿದೆ. ನಿಗಮದ ಖಾತೆಗೆ ಜಮೆ ಆಗುವ ಹಣದಲ್ಲಿ ನಿರ್ವಹಣೆ ಮಾಡುವ ಸಂಸ್ಥೆಗೆ ನೀಡಬೇಕಿರುವ ಕಮಿಷನ್ ಪಾವತಿಸಲಾಗುವುದು. ಹೀಗಾಗಿ ಹಣಕಾಸು ದುರುಪಯೋಗವಾಗುವ ಸಾಧ್ಯತೆಯೇ ಇಲ್ಲ ಎಂದು ಅವರು ವಿವರಿಸಿದರು.
ಹೊಸದಾಗಿ ಆರಂಭ ಮಾಡುತ್ತಿರುವ ಕೊರಿಯರ್ ಸೇವೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಿದರೆ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಅಡಿಪಾಯ ಹಾಕಲಿದ್ದಾರೆ. ಮೊದಲ ಹಂತದಲ್ಲಿ ವರ್ಷಕ್ಕೆ 100 ಕೋಟಿ ವರಮಾನ ನಿರೀಕ್ಷೆ ಮಾಡಲಾಗಿದೆ.
ಅಂಚೆ ಇಲಾಖೆಯ ಜತೆ ಒಪ್ಪಂದ ಮಾಡಿಕೊಂಡು ಇನ್ನಷ್ಟು ವಿಸ್ತಾರವಾಗಿ ಬೆಳೆಯಬಹುದಾಗಿದೆ. ಮುಂದಿನ ದಿನಗಳಲ್ಲಿ ಸಾವಿರಾರು ಕೋಟಿ ಮೊತ್ತದ ವರಮಾನ ಬರುವ ಸಾಧ್ಯತೆ ಇದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೊರಿಯರ್ ಸೇವೆ ಆರಂಭಿಸಿರುವುದರಿಂದ ಸಾರಿಗೆ ಸಂಸ್ಥೆಗಳು ಮತ್ತು ಸಾರ್ವಜನಿಕರಿಗೂ ಅನುಕೂಲವಾಗಲಿದೆ. ರಾಜ್ಯದ ಮೂಲೆ ಮೂಲೆಗೆ ಸಾರಿಗೆ ಸಂಸ್ಥೆಗಳ ಬಸ್ಗಳು ಸಂಚರಿಸುತ್ತಿವೆ. ಈ ಜಾಲ ಉಪಯೋಗಿಸಿಕೊಂಡು ಉತ್ತಮವಾದ ಸೇವೆ ನೀಡಬಹುದಾಗಿದೆ. ವಿಶ್ವಾಸಾರ್ಹತೆ ಮತ್ತು ತ್ವರಿತ ಸೇವೆ ಸಿಗುವ ಕಾರಣ ಜನರಿಗೂ ಅನುಕೂಲವಾಗಲಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.