ಆತ ಸತ್ಯವನ್ನೇ ಪೋಸ್ಟ್ ಮಾಡಿದ್ದಾನೆ, ಸುಳ್ಳು ಹಾಕಿಲ್ಲ: ಪ್ರಚೋದನಕಾರಿ ಪೋಸ್ಟ್ ಸಮರ್ಥಿಸಿದ ಮಾಜಿ ಸಚಿವ ಜೀವರಾಜ್
ಬೆಂಗಳೂರು ಘಟನೆಗೆ ಕಾರಣವಾದ ಪೋಸ್ಟ್ ಬಗ್ಗೆ ಹೇಳಿಕೆ; ವ್ಯಾಪಕ ಆಕ್ರೋಶ
ಚಿಕ್ಕಮಗಳೂರು, ಆ.13: ಸಂಘಪರಿವಾರ ಗುರುವಾರ ನಡೆಸಿದ ಧರಣಿ ವೇಳೆ ಬಿಜೆಪಿ ಮುಖಂಡ, ಮಾಜಿ ಸಚಿವ ಜೀವರಾಜ್ ಅವರು ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದ ಹಿಂಸಾಚಾರಕ್ಕೆ ಕಾರಣ ಎನ್ನಲಾದ ಪ್ರಚೋದನಕಾರಿ ಪೋಸ್ಟ್ ಅನ್ನು ಸಮರ್ಥಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಶೃಂಗೇರಿ ಪಟ್ಟಣದ ರಸ್ತೆಯೊಂದರಲ್ಲಿರುವ ಶಂಕರಾಚಾರ್ಯ ಅವರ ಪುತ್ಥಳಿಯ ಗೋಪುರದ ಮೇಲೆ ಧಾರ್ಮಿಕ ಚಿಹ್ನೆಗಳಿರುವ ಬಾವುಟವೊಂದು ಬುಧವಾರ ರಾತ್ರಿ ಪತ್ತೆಯಾಗಿದ್ದು, ಘಟನೆ ಸಂಬಂಧ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಸಂಘಪರಿವಾರ ಗುರುವಾರ ಧರಣಿ ನಡೆಸಿತು. ಈ ವೇಳೆ ಮಾಜಿ ಸಚಿವ ಜೀವರಾಜ್ ಮಾತನಾಡುತ್ತಾ ಶಾಸಕ ಅಖಂಡ ಶ್ರೀನಿವಾಸ್ಮೂರ್ತಿ ಸಂಬಂಧಿ ಪಿ.ನವೀನ್ ಮಾಡಿದ್ದ ಪ್ರಚೋದನಕಾರಿ ಪೋಸ್ಟ್ ಅನ್ನು ಸಮರ್ಥಿಸಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಬುಧವಾರ ರಾತ್ರಿ ಶೃಂಗೇರಿ ಪಟ್ಟಣದ ರಸ್ತೆಯೊಂದರ ಬಳಿ ಇರುವ ಶಂಕರಾಚಾರ್ಯ ಪುತ್ಥಳಿ ನಿರ್ಮಿಸಿರುವ ಗೋಪುರದ ಮೇಲೆ ಧಾರ್ಮಿಕ ಚಿತ್ರಗಳಿರುವ ಬ್ಯಾನರ್ ಒಂದು ಪತ್ತೆಯಾಗಿತ್ತು. ಈ ಬ್ಯಾನರ್ ಅನ್ನು ಎಸ್ಡಿಪಿಐ ಪಕ್ಷದವರು ಹಾಕಿ, ಕೋಮು ಸಾಮರಸ್ಯ ಕದಡಲು ಹುನ್ನಾರ ನಡೆಸಿದ್ದಾರೆ, ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಗುರುವಾರ ಸಂಘಪರಿವಾರದ ಕಾರ್ಯಕರ್ತರು ಡಿ.ಎನ್.ಜೀವರಾಜ್ ನೇತೃತ್ವದಲ್ಲಿ ಪಟ್ಟಣದ ಪೊಲೀಸ್ ಠಾಣೆ ಎದುರು ದಿಡೀರ್ ಧರಣಿ ನಡೆಸಿದ್ದರು. ಈ ವೇಳೆ ಮಾಜಿ ಸಚಿವ ಜೀವರಾಜ್ ಠಾಣಾಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ, ಆರೋಪಿಗಳು ಪಟ್ಟಣದಲ್ಲೇ ತಿರುಗಾಡುತ್ತಿದ್ದು, ಬಂಧಿಸಲು ಪೊಲೀಸರು ಮೀನಾಮೇಷ ಎಣಿಸುತ್ತಿದ್ದಾರೆ, ಆರೋಪಿಗಳನ್ನು ಬಂಧಿಸದಿದ್ದಲ್ಲಿ ಠಾಣೆ ಎದರೇ ಕುಳಿತು ಪ್ರತಿಭಟನೆ ಮಾಡುತ್ತೇವೆ ಎಂದು ಪಟ್ಟು ಹಿಡಿದ್ದಾರೆ.
ಇದೇ ವೇಳೆ ಮಾತಿನ ಮಧ್ಯೆ ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದ ಗಲಭೆಯ ವಿಚಾರ ಪ್ರಸ್ತಾಪಿಸಿ, ಶಾಸಕ ಅಖಂಡ ಶ್ರೀನಿವಾಸ್ ಅವರ ಅಕ್ಕನ ಮಗನಾಗಿರುವ ನವೀನ್ ಹಾಕಿರುವ ಪೋಸ್ಟ್ ಮುಂದಿಟ್ಟುಕೊಂಡು ಸಣ್ಣ ವಿಚಾರಕ್ಕೆ ಎಸ್ಡಿಪಿಐನವರು ಧಾಂದಲೆ ಮಾಡಿದ್ದಾರೆ. ನವೀನ್ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಪೋಸ್ಟ್ ನಲ್ಲಿ ಏನು ತಪ್ಪಿದೆ. ಆತ ಸತ್ಯವನ್ನೇ ಪೋಸ್ಟ್ ಮಾಡಿದ್ದಾನೆ, ಸುಳ್ಳು ಹಾಕಿಲ್ಲ. ಬೇಕಿದ್ದರೆ ಆ ಸಮುದಾಯದವರ ಪುಸಕ್ತವನ್ನೇ ಓದಲು ಹೇಳಿ ಎಂದು ಹೇಳುವ ಮೂಲಕ ಹಿಂಸಾಚಾರಕ್ಕೆ ಕಾರಣ ಎನ್ನಲಾಗುತ್ತಿರುವ ಪ್ರಚೋದನಕಾರಿ ಪೋಸ್ಟ್ ಅನ್ನು ಸಮರ್ಥಿಸಿಕೊಂಡಿದ್ದಾರೆ.
ಮಾಜಿ ಸಚಿವ ಜೀವರಾಜ್ ಅವರು ನವೀನ್ ಅನ್ನು ಸಮರ್ಥಿಸಿಕೊಳ್ಳುತ್ತಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಬೆಂಗಳೂರಿನ ಘಟನೆಗೆ ಕಾರಣವಾದ ಪೋಸ್ಟ್ ಅನ್ನು ಮಾಜಿ ಸಚಿವರೊಬ್ಬರೋ ಸಾರ್ವಜನಿಕವಾಗಿ ಸಮರ್ಥಿಸಿಕೊಂಡಿದ್ದರ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಡಿ.ಎನ್.ಜೀವರಾಜ್ ಒಮ್ಮೆ ಮಂತ್ರಿಯಾಗಿದ್ದು, ಮೂರು ಬಾರಿ ಶಾಸಕರಾಗಿದ್ದಾರೆ. ಇಂತಹ ಶಾಸಕ ಶಾಸಕರು ಜನರ ಪ್ರತಿನಿಧಿಯಾಗಿರುತ್ತಾರೆ. ಇಂತಹ ಪ್ರತಿನಿಧಿಗಳು ಮಾತನಾಡುವಾಗ ಯಾವ ಸಮುದಾಯಗಳಿಗೂ ನೋವಾಗುವಂತಹ ಹೇಳಿಕೆ ನೀಡಬಾರದು. ಮಾತಿನ ಬರದಲ್ಲಿ ಬೆಂಗಳೂರು ಗಲಭೆಗೆ ಕಾರಣನಾದ ನವೀನ್ ಪೋಸ್ಟ್ ಅನ್ನು ಸಮರ್ಥಿಸಿಕೊಂಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಕೂಡಲೇ ಅವರು ಇದಕ್ಕೆ ಕ್ಷಮೆಯಾಚಿಸಬೇಕು. ಆ ಸಮುದಾಯದ ಧರ್ಮ ಗ್ರಂಥವನ್ನು ಅವರು ಸರಿಯಾಗಿ ಅಧ್ಯಯನ ಮಾಡದೇ ಮಾತನಾಡಿದಂತಿದ್ದು, ರಾಜಕಾರಣಿಯಾದವರು ಧರ್ಮವನ್ನು ತನ್ನ ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಕೈಯಲ್ಲಿ ಕೆಲಸ ಇಲ್ಲದವರು ಮಾತ್ರ ಇಂತಹ ಕೆಲಸ ಮಾಡಲು ಸಾಧ್ಯ. ಜೀವರಾಜ್ ಜವಬ್ದಾರಿಯಿಂದ ನಡೆದುಕೊಳ್ಳಬೇಕು. ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯಬಾರದು.
- ಎಚ್.ಎಚ್.ದೇವರಾಜ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ