ಕಾಲು ಜಾರಿ ಹೇಮಾವತಿ ನದಿಗೆ ಬಿದ್ದು ಮಹಿಳೆ ಮೃತ್ಯು
ಚಿಕ್ಕಮಗಳೂರು, ಆ.14: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆ ಗುರುವಾರ ಮತ್ತೊಂದು ಬಲಿ ಪಡೆದಿದ್ದು, ಮೂಡಿಗೆರೆ ತಾಲೂಕಿನ ಕಡಿದಾಳು ಗ್ರಾಮದಲ್ಲಿ ಮಹಿಳೆಯೊಬ್ಬರು ಹೇಮಾವತಿ ನದಿಗೆ ಕಾಲು ಜಾರಿ ಬಿದ್ದು, ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಮೂಡಿಗೆರೆ ತಾಲೂಕಿನಲ್ಲಿ ಕಳೆದ ವಾರ ಭಾರೀ ಮಳೆಯಾಗಿದ್ದು, ಸದ್ಯ ತಾಲೂಕಿನಾದ್ಯಂತ ಸಾಧಾರಣ ಮಳೆಯಾಗುತ್ತಿದೆ. ಧಾರಾಕಾರ ಮಳೆಯಿಂದಾಗಿ ಹೇಮಾವತಿ ನದಿಯಲ್ಲಿ ತುಂಬಿ ಹರಿಯುತ್ತಿದ್ದು, ಗುರುವಾರ ಬೆಳಗ್ಗೆ ಕಡವಂತಿ ಗ್ರಾಮದ ಮಹಿಳೆ ದೇವಮ್ಮ(55) ಎಂಬವರು ತಮ್ಮ ಮನೆ ಸಮೀಪದಲ್ಲಿದ್ದ ಭತ್ತದ ಗದ್ದೆಗೆ ಹೋಗಲು ಹೇಮಾವತಿ ನದಿ ತೀರದಲ್ಲಿ ಸಾಗಿದ್ದಾರೆ. ಈ ವೇಳೆ ಮಳೆಗೆ ಗದ್ದೆಯೇ ಏರಿ ಕೆಸರಾಗಿದ್ದು, ಕೆಸರಿನಲ್ಲಿ ಕಾಲು ಜಾರಿದ ದೇವಮ್ಮ ನಿಯಂತ್ರಣ ತಪ್ಪಿ ಹೇಮಾವತಿ ನದಿಗೆ ಬಿದ್ದಿದ್ದಾರೆ. ನೀರಿನಲ್ಲಿ ಸುಮಾರು 2 ಕಿಮೀ ಕೊಚ್ಚಿ ಹೋದ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಘಟನೆ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ನದಿಯಿಂದ ಹೊರ ತೆಗೆಯಲಾಗಿದೆ.