ಕೆ.ಜಿ.ಹಳ್ಳಿ, ಡಿ.ಜಿ.ಹಳ್ಳಿ ಹಿಂಸಾಚಾರ: ಚಿಕ್ಕಮಗಳೂರು ಬ್ಯಾರಿ ಒಕ್ಕೂಟ ಖಂಡನೆ
ಚಿಕ್ಕಮಗಳೂರು, ಆ.13: ಬೆಂಗಳೂರಿನ ಕೆ.ಜಿ.ಹಳ್ಳಿ, ಡಿ.ಜಿ.ಹಳ್ಳಿ ವ್ಯಾಪ್ತಿಯಲ್ಲಿ ಮಂಗಳವಾರ ನಡೆದ ಹಿಂಸಾಚಾರ ಮತ್ತು ಅಹಿತಕರ ಘಟನೆಗಳನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಜಿಲ್ಲಾ ಬ್ಯಾರಿ ಒಕ್ಕೂಟದ ಗೌರವಾಧ್ಯಕ್ಷ ಕೆ.ಮುಹಮ್ಮದ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿ ಈ ಗಲಭೆಗೆ ಕಾರಣಕರ್ತನಾದ ನವೀನ್ ಹಾಗೂ ಇದರ ದುರ್ಲಾಭ ಪಡೆದು ಗಲಭೆ ಸೃಷ್ಟಿಸಿ ಸಾಮಾಜಿಕ ಸೌಹಾರ್ಧತೆಯನ್ನು ಹಾಳುಮಾಡಲು ಪ್ರಯತ್ನಿಸಿರುವ ವ್ಯಕ್ತಿಗಳು ಅಥವಾ ಸಂಘಟನೆಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಸರಕಾರವನ್ನು ಆಗ್ರಹಿಸಿರುವ ಅವರು, ಜಿಲ್ಲೆಯಲ್ಲಿ ಇರುವ ಯಾವುದೆ ಸಂಘಟನೆಗಳು ಇಂತಹ ಘಟನೆಗಳಿಗೆ ಆಸ್ಪದ ನೀಡದೆ ಜಿಲ್ಲೆಯಲ್ಲಿ ಶಾಂತಿ ಸೌಹಾರ್ಧತೆಯನ್ನು ಕಾಪಡಲು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸುತ್ತಾ ಬಂದಿವೆ. ಇನ್ನೂ ಮುಂದಕ್ಕೂ ಇದೆ ಪರಂಪರೆಯನ್ನು ಮುಂದುವರಿಸಿಕೊಂಡು ಶಾಂತಿ ಸೌಹಾರ್ದತೆಯನ್ನು ಕಾಪಾಡುವುದು ಎಲ್ಲರ ಕರ್ತವ್ಯವಾಗಿದೆ ಎಂದವರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಹರಡಿಬಿಡುವ ಸಂದೇಶಗಳನ್ನು ಮತ್ತು ವದಂತಿಗಳಿಂದ ಯುವಕರು ಪ್ರಚೋದಿತರಾಗಿ ರೊಚ್ಚಿಗೇಳದಂತೆ ಆಯಾಭಾಗದ ಸಮಾಜದ ಮತ್ತು ಧಾರ್ಮಿಕ ಮುಖಂಡರು ಯುವಕರಿಗೆ ಸರಿಯಾದ ಮಾರ್ಗದರ್ಶನವನ್ನು ನೀಡಬೇಕು. ಸಮಾಜದ ಸೌಹಾರ್ದತೆಯನ್ನು ಕಾಪಾಡಲು ಸಮಾಜದ ಧಾರ್ಮಿಕ ಮುಖಂಡರು ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.