ಶಿವಮೊಗ್ಗ: ಪ್ರಿಯತಮನ ಜೊತೆ ಹೊಳೆಗೆ ಹಾರಿದ ಯುವತಿ ಸಾವು; ಯುವಕನಿಗಾಗಿ ಶೋಧ
ಶಿವಮೊಗ್ಗ, ಆ.14: ಬೈಪಾಸ್ ರಸ್ತೆಯ ತುಂಗಾ ಸೇತುವೆ ಮೇಲಿಂದ ಪ್ರೇಮಿಗಳಿಬ್ಬರು ಹೊಳೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಈ ಪೈಕಿ ಯುವತಿ ಸಾವನ್ನಪ್ಪಿದ್ದಾಳೆ. ಯುವಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಹೊಳೆಗೆ ಹಾರಿದ ಪ್ರೇಮಿಗಳನ್ನು ಹುರುಳಿಹಳ್ಳಿಯ ಸಂತೋಷ್ (25) ಕಾಕನಹಸೂಡಿ ಗ್ರಾಮದ ಅನುಷಾ (20) ಎಂದು ಗುರುತಿಸಲಾಗಿದೆ. ಈ ಪೈಕಿ ಅನುಷಾ ಮೃತಪಟ್ಟಿದ್ದಾಳೆ. ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ.
ಇಂದು ಮದ್ಯಾಹ್ನ ತನ್ನ ಪ್ರಿಯತಮನ ಜೊತೆಗೆ ಯುವತಿಯು ಹೊಳೆಗೆ ಹಾರಿದ್ದು, ಈಕೆಯನ್ನು ರಕ್ಷಣೆ ಮಾಡಿ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಯುವಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಪಿಯುಸಿ ಕಲಿತಿದ್ದ ಅನುಷಾ ಶಿವಮೊಗ್ಗದ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ್ ಎಂಬಾತನನ್ನು ಪ್ರೀತಿಸುತ್ತಿದ್ದಳು ಎಂದು ಪೊಲೀಸ್ ಮೂಲದಿಂದ ತಿಳಿದು ಬಂದಿದೆ. ಘಟನೆ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.