ರಾಜಕೀಯ ಅಸ್ತಿತ್ವಕ್ಕಾಗಿ ಕೈ ಶಾಸಕರ ಕ್ಷೇತದಲ್ಲಿ ಗಲಭೆ ನಡೆಸುತ್ತಿರುವ ಎಸ್ಡಿಪಿಐ: ಸಚಿವ ಅಶೋಕ್ ಆರೋಪ
"ಬಿಎಸ್ವೈ ಸೂಚನೆ ಕೊಟ್ಟ ಕೂಡಲೇ ಎಸ್ಡಿಪಿಐ ನಿಷೇಧಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ"
ಬೆಂಗಳೂರು, ಆ. 14: `ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆಯಲ್ಲಿ ಎಸ್ಡಿಪಿಐ ನೇರ ಪಾತ್ರವಿದೆ. ಈ ಹಿಂದೆ ನಡೆದ ಹಲವಾರು ಹಿಂದೂ ಕಾರ್ಯಕರ್ತರ ಹತ್ಯೆ ಹಾಗೂ ಹಲವು ದೇಶದ್ರೋಹಿ ಚಟುವಟಿಕೆಗಳಲ್ಲಿ ಎಸ್ಡಿಪಿಐ ಪಾತ್ರಗಳಿವೆ. ಈ ನಿಟ್ಟಿನಲ್ಲಿ ಎಸ್ಡಿಪಿಐ ಸಂಘಟನೆಯನ್ನು ನಿಷೇಧಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡುತ್ತೇನೆ' ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಕಾನೂನು ಉಲ್ಲಂಘಿಸುವವರನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಹೆಡೆಮುರಿ ಕಟ್ಟಿ ಕಾರಾಗೃಹಕ್ಕೆ ತಳ್ಳುತ್ತೇವೆ. ಇದು ರಾಜಾಹುಲಿ ಸರಕಾರ. ದೇಶದಲ್ಲಿ ಯಾವುದೇ ಧರ್ಮದ ಹೆಸರಲ್ಲಿ ಸಂವಿಧಾನ ರಚಿಸಿಲ್ಲ. ಇದು ಪಾಕಿಸ್ತಾನವಲ್ಲ, ಇದು ಭಾರತ. ಧರ್ಮದ ಹೆಸರಿನಲ್ಲಿ ಏನು ಬೇಕಾದರೂ ಮಾಡಲು ಅವಕಾಶ ನೀಡುವುದಿಲ್ಲ' ಎಂದು ತಿಳಿಸಿದರು.
ಒಂದು ದೇಶ, ಒಂದು ಕಾನೂನು, ಒಂದು ಧ್ವಜ, ಇದನ್ನು ನಂಬಿ ಎಲ್ಲರೂ ಇಲ್ಲಿ ಒಗ್ಗಟ್ಟಿನಿಂದ ಬದುಕುತ್ತಿದ್ದಾರೆ. ನಮ್ಮ ಸಂವಿಧಾನದಡಿ ಬದುಕುವವರು ಮಾತ್ರ ಈ ದೇಶದಲ್ಲಿರಬೇಕು. ನಾವು ಕನ್ನಡಿಗರು ಎಲ್ಲರನ್ನೂ ಸ್ವೀಕಾರ ಮಾಡುವವರು, ಅದನ್ನೇ ಸೋಲು ಎಂದು ತಿಳಿಯಬೇಡಿ' ಎಂದು ಪರೋಕ್ಷ ಎಚ್ಚರಿಕೆ ನೀಡಿದ ಅಶೋಕ್, `ನಗರದ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ' ಎಂದು ಸ್ಪಷ್ಟನೆ ನೀಡಿದರು.
ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳನ್ನು ನಿಷೇಧಿಸುವ ಸಂಬಂಧ ಸರಕಾರ ಗಂಭೀರವಾಗಿ ಚಿಂತನೆ ನಡೆಸಿದ್ದು, ಕೆಲ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ. ಗೃಹ ಇಲಾಖೆಯಿಂದ ಎಸ್ಡಿಪಿಐ ಕೃತ್ಯಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸೂಚನೆ ಕೊಟ್ಟ ಕೂಡಲೇ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಆರ್.ಅಶೋಕ್ ತಿಳಿಸಿದರು.
ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಎಸ್ಡಿಪಿಐಗೆ ನೇರ ಸಂಬಂಧವಿದೆ. ಅಲ್ಲದೆ, ರಾಜ್ಯದಲ್ಲಿ ಬಿಜೆಪಿ ಮತ್ತು ಆರೆಸೆಸ್ಸ್ ಮುಖಂಡರ ಹತ್ಯೆಯಲ್ಲಿ ಈ ಸಂಘಟನೆಗಳ ಕೈವಾಡ ಇದ್ದು, ಇದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಹೀಗಾಗಿ ಸಂಘಟನೆಗಳನ್ನು ನಿಷೇಧಿಸುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲು ಸರಕಾರ ತೀರ್ಮಾನಿಸಿದೆ ಎಂದು ಅವರು ಇದೇ ವೇಳೆ ಸ್ಪಷ್ಟನೆ ನೀಡಿದರು.
ಡಿ.ಜೆ.ಹಳ್ಳಿ ಗಲಭೆ ಅದೊಂದು ವ್ಯವಸ್ಥಿತ ಪೂರ್ವ ನಿಯೋಜಿತ ಕೃತ್ಯ. ಕಾಂಗ್ರೆಸ್ ಶಾಸಕರು ಮತ್ತು ಪಾಲಿಕೆ ಸದಸ್ಯರ ಮುಸುಕಿನ ಗುದ್ದಾಟದಿಂದಲೇ ದೊಂಬಿ ನಡೆದಿದೆ. ಕಾಂಗ್ರೆಸ್ ಮತ್ತು ಎಸ್ಡಿಪಿಐ ನಡುವಿನ ರಾಜಕೀಯ ಬೆಂಕಿಯಾಗಿದ್ದು ಈ ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಯಾರೊಬ್ಬರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಅವರು ತಿಳಿಸಿದರು.
ಪೊಲೀಸ್ ಗೋಲಿಬಾರ್ ನಲ್ಲಿ ಮೃತಪಟ್ಟವರು ಅಮಾಯಕರು ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ, ಮಧ್ಯರಾತ್ರಿ ಅವರು ಬೀದಿಗೆ ಬಂದ್ದದ್ದು ಏಕೆ? ಇದಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡರು ಉತ್ತರ ನೀಡಬೇಕು ಎಂದು ಆಗ್ರಹಿಸಿದ ಅಶೋಕ್, ಎಸ್ಡಿಪಿಐ ಮತ್ತು ಕಾಂಗ್ರೆಸ್ನ ರಾಜಕೀಯ ಸಂಘರ್ಷಕ್ಕೆ ಮೊದಲ ಗುರಿಯಾಗಿದ್ದು ಶಾಸಕ ತನ್ವೀರ್ ಸೇಠ್, ಇದೀಗ ಶಾಸಕ ಅಂಖಡ ಶ್ರೀನಿವಾಸಮೂರ್ತಿ ಗುರಿಯಾಗಿದ್ದಾರೆ ಎಂದು ತಿರುಗೇಟು ನೀಡಿದರು.
ಗಲಭೆ ನಿಯಂತ್ರಿಸುವಲ್ಲಿ ಗುಪ್ತಚರ ವಿಫಲವಾಗಿದೆ ಎಂಬ ಕಾಂಗ್ರೆಸ್ ಆರೋಪದಲ್ಲಿ ಹುರುಳಿಲ್ಲ. ಗುಪ್ತಚರ ಇಲಾಖೆ ಅತ್ಯಂತ ಸಮರ್ಥ ರೀತಿಯಲ್ಲಿ ಘಟನೆಯನ್ನು ಹತ್ತಿಕ್ಕಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲಾಗಿದೆ. ಕಾಂಗ್ರೆಸ್ ಪಕ್ಷದೊಳಗಿನ ಗುಪ್ತಚರ ಸರಿಯಾಗಿದ್ದರೆ, ಪಕ್ಷದೊಳಗಿನ ಸಂಘರ್ಷದ ಬಗ್ಗೆ ತಿಳಿದುಕೊಳ್ಳಬೇಕಾಗಿತ್ತು ಎಂದ ಆಕ್ರೋಶ ವ್ಯಕ್ತಪಡಿಸಿದ ಅಶೋಕ್, ಎಸ್ಡಿಪಿಐ ಸಂಘಟನೆ ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಕಾಂಗ್ರೆಸ್ ಮತಗಳನ್ನು ಸೆಳೆಯಲು ಕೈ ಶಾಸಕರ ಕ್ಷೇತದಲ್ಲಿ ಗಲಭೆ ನಡೆಸುತ್ತಿದೆ ಎಂದು ದೂರಿದರು.
ನಗರದ ಕೆ.ಜಿ.ಹಳ್ಳಿ ಗಲಭೆ ಆರೋಪಿಯಾಗಿರುವ ಫೈರೋಝ್ ಪಾಷ ಎಂಬ ವ್ಯಕ್ತಿ ಕಾಂಗ್ರೆಸ್ ಕಾರ್ಯಕರ್ತ ಎಂಬಂತೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು, ಈ ವ್ಯಕ್ತಿ ಬಹಳ ಸಮಯದ ಹಿಂದೆಯೇ ಎಸ್ಡಿಪಿಐ ಸೇರಿ ಅಲ್ಲಿ ಸಕ್ರಿಯನಾಗಿದ್ದ. ಮಧ್ಯಮಗಳು ಸತ್ಯಾಸತ್ಯತೆ ಅರಿತು ವರದಿ ಬಿತ್ತರಿಸಬೇಕೆಂದು ಮನವಿ. ಗಲಭೆಗೆ ಕಾರಣರಾದವರ ವಿರುದ್ಧ ಸೂಕ್ತ ತನಿಖೆ ನಡೆಸಿ, ಕಾನೂನು ರೀತಿಯ ಕ್ರಮ ಕೈಗೊಳ್ಳಲಿ. ಕಾಂಗ್ರೆಸ್ ಪಕ್ಷ ಈ ನೆಲದ ಕಾನೂನು, ಸಂವಿಧಾನಕ್ಕೆ ಗೌರವ ನೀಡುವವರನ್ನು ಮಾತ್ರ ಬೆಂಬಲಿಸಿದೆ, ಬೆಂಬಲಿಸುತ್ತದೆ. ರಾಜ್ಯದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಲು ಮನವಿ ಮಾಡುತ್ತೇವೆ’
-ಸಲೀಂ ಅಹ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ