ಗಲಭೆಗೆ ಕಾರಣವಾದ ಸಂಘಟನೆಯನ್ನು ನಿಷೇಧಿಸಲಿ: ಬಸವರಾಜ ಹೊರಟ್ಟಿ
ಹುಬ್ಬಳ್ಳಿ, ಆ.15: ರಾಜಧಾನಿಯಲ್ಲಿ ನಡೆದಿರುವ ಗಲಭೆ ಹಾಗೂ ಹಿಂಸಾಚಾರದಲ್ಲಿ ಯಾವುದೇ ಸಂಘಟನೆಗಳ ಪಾತ್ರವಿರುವುದು ಸಾಬೀತಾದರೆ ಯಾವುದೇ ಮುಲಾಜಿಲ್ಲದೇ ಅವುಗಳನ್ನು ನಿಷೇಧಿಸಲು ಸರಕಾರ ಮುಂದಾಗಬೇಕು ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ತಾಲ್ಲೂಕು ಆಡಳಿತದ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಶನಿವಾರ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜಕೀಯ ಪಕ್ಷಗಳು ವೋಟ್ ಬ್ಯಾಂಕ್ ಮಾಡುವುದು ಹೇಗೆಂದು ದಿನಪೂರ್ತಿ ಚಿಂತಿಸುತ್ತವೆ. ನಾವು ಕೇವಲ ಮತಗಳನ್ನು ನೋಡುತ್ತೇವೆ ಹೊರತು ಜನರ ನೋವು, ಸಂಕಟಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಯಾವುದೇ ರಾಜಕೀಯ ಪಕ್ಷಗಳು ಜನರ ಜೀವದ ಜತೆಗೆ ಆಟವಾಡಬಾರದು ಎಂದು ನುಡಿದರು.
ಜನರ ಮರಣದ ಸಮಯದಲ್ಲಿಯೂ ರಾಜಕೀಯ ಸರಿಯೇ? ಇದರಿಂದ ಮರ್ಯಾದೆಯಿದ್ದವರು ರಾಜಕಾರಣಕ್ಕೆ ಹೋಗಲೇಬಾರದು ಎನ್ನುವ ಅಭಿಪ್ರಾಯ ಜನರಲ್ಲಿ ಮೂಡುತ್ತಿದೆ. ನಾನು 40 ವರ್ಷಗಳಿಂದ ರಾಜಕೀಯ ನೋಡಿಕೊಂಡು ಬಂದಿದ್ದೇನೆ. ಈಗ ರಾಜಕೀಯ ಮೌಲ್ಯ ಎಲ್ಲಿ ಉಳಿದಿದೆ ಎಂದು ಬೇಸರದಿಂದ ಪ್ರಶ್ನಿಸಿದರು.
ನಾವು ಬೇರೆಯವರು ನಮ್ಮನ್ನು ನೋಡಿ ಕಲಿಯುವಂತೆ ನಡೆದುಕೊಳ್ಳಬೇಕು. ಬೆಂಗಳೂರಿನ ಘಟನೆ ಕುರಿತು ತನಿಖೆಗೆ ಸಮಿತಿ ರಚಿಸಲಾಗಿದ್ದು, ವರದಿ ಬಂದ ಬಳಿಕ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು. ಆಗಲೂ ಮೃದುಧೋರಣೆ ತೋರಿದರೆ ಏನೂ ಮಾಡಿದರೂ ನಡೆಯುತ್ತದೆ ಎನ್ನುವ ಭಾವನೆ ಜನರಲ್ಲಿ ಮೂಡುತ್ತದೆ ಎಂದು ಅಭಿಪ್ರಾಯಪಟ್ಟರು.
ಸಾರ್ವಜನಿಕ ಗಣೇಶೋತ್ಸವ ಪ್ರತಿಷ್ಠಾಪನೆ ಬಗ್ಗೆ ಸರಕಾರದ ನಿರ್ಧಾರದ ಬಗ್ಗೆ ಮಾತನಾಡಿದ ಹೊರಟ್ಟಿ, ಸರಕಾರ ದಿಢೀರನೆ ಈ ನಿರ್ಧಾರ ತೆಗೆದುಕೊಳ್ಳಬಾರದಿತ್ತು. ಜನರ ಭಾವನೆಗಳಿಗೆ ಸಂಬಂಧಿಸಿದ ವಿಷಯವಾದ ಕಾರಣ ಷರತ್ತುಗಳನ್ನು ವಿಧಿಸಿ ಅನುಮತಿ ಕೊಡಬೇಕಿತ್ತು ಎಂದರು.