ಬೆಳಗಾವಿ ರಾಜಕಾರಣಿಗಳು ಗಂಡಸರೂ ಅಲ್ಲ, ಹೆಂಗಸರೂ ಅಲ್ಲ: ವಾಟಾಳ್ ನಾಗರಾಜ್
ಬೆಳಗಾವಿ, ಆ.29: ಬೆಳಗಾವಿ ಜಿಲ್ಲೆಯ ರಾಜಕಾರಣಿಗಳು ಗಂಡಸರು ಅಲ್ಲ, ಹೆಂಗಸರೂ ಅಲ್ಲ ವಿಚಿತ್ರ ರಾಜಕಾರಣಿಗಳು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಲೇವಡಿ ಮಾಡಿದ್ದಾರೆ.
ಶನಿವಾರ ಹಿರೇಬಾಗೇವಾಡಿಯಲ್ಲಿ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿವಾದದ ಶಾಂತಿ ಸಭೆ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿದ ಅವರು ಅಂಗಡಿಯಿಂದ ಹಿಡಿದು ಮುಂಗಟ್ಟುವರೆಗೂ ಎಲ್ಲರದ್ದು ಇದೇ ಪರಿಸ್ಥಿತಿ. ಎಲ್ಲರೂ ಮರಾಠಾ ಏಜೆಂಟರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಯಣ್ಣ ಪ್ರತಿಮೆ ಜಾಗದಲ್ಲಿ ಶಿವಾಜಿ ಸರ್ಕಲ್ ಎಂದು ಯಾರು ರಾಜಿ ಮಾಡಿದ್ದು. ಮರಾಠಿಯವರಿಗೆ ಕರ್ನಾಟಕ ಅರ್ಧ ಬರೆದುಕೊಟ್ಟಿದ್ದೀರಾ ಹೇಗೆ, ಎಂಇಎಸ್ನವರನ್ನು ಒದ್ದು ಹೊರಗೆ ಹಾಕಿ, ರಾಯಣ್ಣ ಪ್ರತಿಮೆ ಇರುವ ಜಾಗದಲ್ಲಿ ಶಿವಾಜಿ ಸರ್ಕಲ್ ನಾವು ಒಪ್ಪಲ್ಲ ಎಂದರು.
ಆ.31ರಂದು ಬೆಂಗಳೂರಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಇದಕ್ಕೂ ಬಗ್ಗದಿದ್ದರೆ ಕರ್ನಾಟಕ ಬಂದ್ಗೆ ಕರೆ ನೀಡುತ್ತೇವೆ. ಬೆಳಗಾವಿ ನಮ್ಮದು, ಮರಾಠಿಗರದ್ದು ಶಿವಸೇನೆಯರದ್ದಲ್ಲ ಎಂದರು.
ಬಿ.ಎಸ್ ಯಡಿಯೂರಪ್ಪನವರೇ ನಿಮಗೆ ನಾಲಿಗೆ ಇಲ್ವಾ. ಮರಾಠಿಗರ ವೋಟ್ಗಾಗಿ ಕನ್ನಡಿಗರನ್ನು ತುಳಿಯುತ್ತಿದ್ದಾರೆ. ಪ್ರಾಣ ಹೋದರೂ ಶಿವಾಜಿ ಸರ್ಕಲ್ ಮಾಡುವುದಕ್ಕೆ ಬಿಡುವುದಿಲ್ಲ ಎಂದರು.