ಶೈಕ್ಷಣಿಕ ಕ್ಷೇತ್ರದ ಮೇಲೆ ಕೊರೋನ ಪರಿಣಾಮ: ಮಕ್ಕಳನ್ನು ಶಾಲೆಗೆ ದಾಖಲಿಸಲು ಪೋಷಕರಿಗೆ ಆರ್ಥಿಕ ಸಂಕಷ್ಟ
ಬೆಂಗಳೂರು, ಆ.29: ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್ಡೌನ್ ಹಾಗೂ ಆ ನಂತರದ ಉದ್ಯೋಗ ನಷ್ಟವು ಶೈಕ್ಷಣಿಕ ಕ್ಷೇತ್ರದ ಮೇಲೆ ಭಾರೀ ಪರಿಣಾಮವನ್ನು ಬೀರಿದ್ದು, ಹಲವು ಪೋಷಕರು ಪ್ರಸಕ್ತ(2020-21) ಸಾಲಿನಲ್ಲಿ ತಮ್ಮ ಮಕ್ಕಳನ್ನು ಶಾಲೆಗಳಿಗೆ ಸೇರಿಸದಿರುವಂತಹ ತೀರ್ಮಾನಕ್ಕೆ ಬಂದಿದ್ದಾರೆ.
ರಾಜ್ಯದಲ್ಲಿ ಮಧ್ಯಮ ವರ್ಗದ ಬಹುತೇಕ ಜನತೆ ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದ ಖಾಸಗಿ ಶಾಲೆಗೆ ದಾಖಲು ಮಾಡಿದ್ದಾರೆ. ಹಾಗೂ ಇವರ ದುಡಿಮೆಯ ಶೇ.30ಕ್ಕಿಂತ ಹೆಚ್ಚು ಹಣ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ವ್ಯಯಿಸುತ್ತಾರೆ. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಉದ್ಯೋಗವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದೇವೆ. ಹೀಗಾಗಿ ಈ ವರ್ಷ ನಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸದಿರಲು ತೀರ್ಮಾನಿಸಿದ್ದೇವೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಅಮೃತಾ ಎಂಬ ಖಾಸಗಿ ಶಾಲೆಯ ಶಿಕ್ಷಕಿ, ಕೋವಿಡ್ನಿಂದಾಗಿ ಶಾಲೆಗಳು ಪ್ರಾರಂಭಗೊಂಡಿಲ್ಲ. ಹೀಗಾಗಿ ನನಗೆ ಕೆಲಸವೂ ಇಲ್ಲ. ಹಾಗೂ ಸಂಬಳವೂ ಇಲ್ಲವಾಗಿದೆ. ಈಗ ಖಾಸಗಿ ಶಾಲೆಗಳಲ್ಲಿ ಆನ್ಲೈನ್ ತರಗತಿ ಪ್ರಾರಂಭಗೊಂಡಿದೆ. ಆದರೆ, ನನನ್ನು ಕೆಲಸಕ್ಕೆ ತೆಗೆದುಕೊಂಡಿಲ್ಲ. ನನ್ನ ಇಬ್ಬರು ಮಕ್ಕಳು ಆನೇಕಲ್ ತಾಲೂಕು ಅತ್ತಿಬೆಲೆಯಲ್ಲಿ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆ. ದೊಡ್ಡ ಮಗ ಮೂರನೇ ತರಗತಿ ಓದುತ್ತಿದ್ದಾನೆ. ಅವನಿಗೆ ಆನ್ಲೈನ್ ತರಗತಿಗೆ ನಡೆಯುತ್ತಿದೆ. ಆದರೆ, ಚಿಕ್ಕ ಮಗನನ್ನು ಒಂದನೇ ತರಗತಿಗೆ ಸೇರಿಸಬೇಕಾಗಿತ್ತು. ಆದರೆ, ಆರ್ಥಿಕ ಸಮಸ್ಯೆಯಿಂದಾಗಿ ಶಾಲೆಗೆ ದಾಖಲಿಸಲಿಲ್ಲವೆಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಮತ್ತೊಬ್ಬ ಮಹಿಳೆ ಮಾತನಾಡುತ್ತಾ, ನನ್ನ ಮಗುವನ್ನು ಸಾಲಸೋಲ ಮಾಡಿ ಇಂಗ್ಲಿಷ್ ಮೀಡಿಯಂಗೆ ಸೇರಿಸಿದ್ದೇವೆ. ಈಗ ಯುಕೆಜಿ ಪಾಸಾಗಿ ಒಂದನೇ ತರಗತಿಗೆ ಹೋಗಿದ್ದಾನೆ. ಅವನಿಗೆ ಮೊಬೈಲ್ನಲ್ಲಿ ಪಾಠ ಮಾಡ್ತಾರಂತೆ. ನಮ್ಮ ಮನೆಯಲ್ಲಿ ದೊಡ್ಡ ಮೊಬೈಲ್ ಇಲ್ಲ. ಹಾಗೂ ಮೊಬೈಲ್ನಲ್ಲಿ ಪಾಠ ಮಾಡಿದರೆ ನನ್ನ ಮಗುವಿಗೆ ಅರ್ಥವಾಗುತ್ತದೆಯೇ. ಹೀಗಾಗಿ ಈ ವರ್ಷ ಓದದಿದ್ದರೆ ಪರವಾಗಿಲ್ಲ. ಮುಂದಿನ ವರ್ಷ ಶಾಲೆಗೆ ಸೇರಿಸುತ್ತೇನೆಂದು ಅಭಿಪ್ರಾಯಿಸಿದ್ದಾರೆ.
ಹೀಗೆ ತಮ್ಮ ವಿದ್ಯಾಭ್ಯಾಸದ ಕುರಿತು ಪೋಷಕರನ್ನು ವಿಚಾರಿಸಿದಾಗ, ಕಳೆದ ಆರು ತಿಂಗಳಿಂದ ಕೆಲಸ ಇಲ್ಲದಿರುವುದು, ಆನ್ಲೈನ್ ತರಗತಿಯ ಗೊಂದಲ ಹಾಗೂ ಕೊರೋನ ಭಯದಿಂದಾಗಿ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಸಾಧ್ಯವಾಗದಿರುವುದರ ಕುರಿತು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ನಾನು ಸ್ಕೂಲ್ ವ್ಯಾನ್ ಚಾಲಕನಾಗಿದ್ದೇನೆ. ನನಗೆ ತಿಂಗಳಿಗೆ 14ಸಾವಿರ ರೂ. ವೇತನ ಬರುತ್ತಿತ್ತು. ಈಗ ಕೋವಿಡ್ನಿಂದಾಗಿ ಶಾಲೆ ಪ್ರಾರಂಭಗೊಂಡಿಲ್ಲ. ಹೀಗಾಗಿ ಸಂಬಳವೂ ಇಲ್ಲವಾಗಿದೆ. ನನ್ನ ಒಬ್ಬ ಮಗಳು ಈ ಬಾರಿ ಎಸೆಸೆಲ್ಸಿ ಓದುತ್ತಿದ್ದಾಳೆ. ಅವಳಿಗೆ ಆನ್ಲೈನ್ ತರಗತಿ ನಡೆಯುತ್ತಿದೆ. ನನ್ನ ಎರಡನೇ ಮಗ ಎಂಟನೆ ತರಗತಿಗೆ ಹೋಗಬೇಕು. ಶಾಲೆಗೆ ದಾಖಲಿಸಲು ಆರ್ಥಿಕ ಸಮಸ್ಯೆ ಎದುರಾಗಿದೆ.
-ಮುನಿರಾಜು, ಮಲ್ಲೇಶ್ವರಂ ನಿವಾಸಿ