ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ, ನಾಲ್ವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು, ಸೆ.3: ರಾಜ್ಯ ಸರಕಾರವು ಮಂಗಳೂರು ವಿದ್ಯುತ್ ಸರಬರಾಜು ನಿಗಮ(ಮೆಸ್ಕಾಂ)ದ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್ ಆರ್. ಅವರನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿಯನ್ನಾಗಿ ವರ್ಗಾವಣೆ ಮಾಡಿದ್ದು, ಸ್ಥಳ ನಿಯುಕ್ತಿಯ ನಿರೀಕ್ಷೆಯಲ್ಲಿದ್ದ ಐಎಎಸ್ ಅಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನಿಯೋಜಿಸಿದೆ.
ಐಪಿಎಸ್ ಅಧಿಕಾರಿಗಳ ವರ್ಗಾವಣೆ: ರಾಜ್ಯ ಸರಕಾರವು ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಬೆಂಗಳೂರು ನಗರದ ಈಶಾನ್ಯ ವಿಭಾಗದ ಡಿಸಿಪಿಯಾಗಿದ್ದ ಡಾ.ಭೀಮಶಂಕರ್ ಎಸ್.ಗುಳೇದ್ ಅವರನ್ನು ಅಪರಾಧ ತನಿಖಾ ದಳದ ಎಸ್ಪಿಯನ್ನಾಗಿ ವರ್ಗಾವಣೆ ಮಾಡಿದೆ.
ಐಪಿಎಸ್ ಅಧಿಕಾರಿ ಸಿ.ಕೆ.ಬಾಬಾ ಅವರನ್ನು ವರ್ಗಾವಣೆ ಮಾಡಿ ಆ.26ರಂದು ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿ, ಅವರನ್ನು ಬೆಂಗಳೂರು ನಗರದ ಈಶಾನ್ಯ ವಿಭಾಗದ ಡಿಸಿಪಿಯನ್ನಾಗಿ ನಿಯೋಜಿಸಲಾಗಿದೆ. ಕೆಎಸ್ಆರ್ಪಿಯ 9ನೆ ಬೆಟಾಲಿಯನ್ನ ಕಮಾಂಡೆಂಟ್ ಆಗಿದ್ದ ಎಸ್.ಗಿರೀಶ್ ಅವರನ್ನು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.
ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಡಾ.ಅನೂಪ್ ಎ.ಶೆಟ್ಟಿಯವರನ್ನು ಕೆಎಸ್ಆರ್ಪಿಯ 9ನೆ ಬೆಟಾಲಿಯನ್ನ ಕಮಾಂಡೆಂಟ್ ಆಗಿ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.