ಡ್ರಗ್ಸ್ ಮಾಫಿಯಾ ಹಿಂದೆ 32 ರಾಜಕಾರಣಿಗಳಿದ್ದಾರೆ, ದಾಖಲೆ ನೀಡುತ್ತೇನೆ: ಪ್ರಮೋದ್ ಮುತಾಲಿಕ್
ಮಂಡ್ಯ, ಸೆ.12: ಡ್ರಗ್ಸ್ ಮಾಫಿಯಾ ಹಿಂದೆ ರಾಜ್ಯದ 32 ಮಂದಿ ರಾಜಕಾರಣಿಗಳಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲ ಪಕ್ಷದವರೂ ಇದ್ದಾರೆ. ಇದರ ವಿವರವನ್ನು ದಾಖಲೆ ಸಮೇತ ಗೃಹ ಸಚಿವರಿಗೆ ತಲುಪಿಸುತ್ತೇನೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.
ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಡ್ರಗ್ಸ್ ಮಾಫಿಯದಲ್ಲಿ ಶಾಸಕ ಝಮೀರ್ ಅಹ್ಮದ್ ಇರುವುದು ನೂರಕ್ಕೆ ನೂರು ಸತ್ಯ. ರಾಜಕೀಯ ಪ್ರಭಾವ ಇರುವುದರಿಂದ ಅವರ ಬಂಧನ ಆಗುತ್ತಿಲ್ಲ. ಬಿಜೆಪಿಯವರಿಗೆ ಧಮ್ ಇದ್ದರೆ ಕೂಡಲೇ ಬಂಧಿಸಲಿ ಎಂದರು.
ದಾವುದ್ ಇಬ್ರಾಹಿಂ ಈ ಡ್ರಗ್ಸ್ ದಂಧೆಯ ಮೂಲ ಪುರುಷ. ದೇಶದ ಯುವಜನರನ್ನು ದುರ್ಬಲಗೊಳಿಸಲು ಈ ಮಾಫಿಯಾ ಕೆಲಸ ಮಾಡುತ್ತಿದೆ. ಹೈಸ್ಕೂಲ್ ವಿದ್ಯಾರ್ಥಿಗಳವರೆಗೂ ಡ್ರಗ್ಸ್ ಪ್ರವೇಶ ಮಾಡಿದೆ. ಲವ್ ಜಿಹಾದ್, ಡ್ರಗ್ಸ್ ಜಿಹಾದ್ ಎರಡಕ್ಕೂ ನೇರ ಸಂಪರ್ಕವಿದೆ ಎಂದು ಅವರು ದೂರಿದರು.
ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ಈ ಡ್ರಗ್ಸ್ ಮಾಫಿಯಾ ಇದೆ. ಇದು ಪೊಲೀಸರಿಗೂ ಗೊತ್ತಿದೆ. ಆದರೆ, ರಾಜಕಾರಣಿಗಳು ಅವರ ಕೈಕಟ್ಟಿ ಹಾಕಿದ್ದಾರೆ. ಕೇಂದ್ರದಿಂದ ಬಂದು ರೈಡ್ ಮಾಡುತ್ತಾರೆ, ಕರ್ನಾಟಕದ ಗುಪ್ತಚರ ಇಲಾಖೆ ಕತ್ತೆ ಕಾಯುತ್ತಿದೆಯಾ ಎಂದು ಅವರು ಆಪಾದಿಸಿದರು.
ಮಂಡ್ಯದ ಅರ್ಕೇಶ್ವರ ದೇವಾಲಯದ ಮೂವರು ಅಮಾಯಕ ಅರ್ಚಕರ ಕೊಲೆಯಾಗಿದೆ. ದೇವಾಲಯದ ಸಿಸಿ ಕ್ಯಾಮರಾ ಕೆಟ್ಟು ಹೋಗಿದೆ ಎನ್ನಲಾಗುತ್ತಿದ್ದು, ಅದನ್ನು ದುರಸ್ತಿ ಏಕೆ ಮಾಡಿಸಿಲ್ಲ. ಹಾಗಾಗಿ ಮುಜರಾಯಿ ಇಲಾಖೆ ಅಧಿಕಾರಿಗಳನ್ನು ಅಮಾನತುಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ವಲಸೆ ಸಚಿವರು ಲೂಟಿಕೋರರು
ಮದ್ದೂರಿನಲ್ಲಿಯೂ ಸುದ್ದಿಗಾರರ ಜತೆ ಮಾತನಾಡಿದ ಮುತಾಲಿಕ್, ಕಾಂಗ್ರೆಸ್, ಜೆಡಿಎಸ್ನಿಂದ ಬಿಜೆಪಿಗೆ ವಲಸೆ ಬಂದಿರುವ 17 ಮಂದಿ ಸಚಿವರು ಒಬ್ಬರಿಗಿಂತ ಒಬ್ಬರು ಲೂಟಿಕೋರರು. ಇವರು ನರೇಂದ್ರ ಮೋದಿ ಅವರಿಗಾಗಿ ಬಿಜೆಪಿಗೆ ಬಂದಿಲ್ಲ. ತಮ್ಮನ್ನು ರಕ್ಷಿಸಿಕೊಳ್ಳಲು ಬಿಜೆಪಿಗೆ ಬಂದಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಗೆ ಭ್ರಷ್ಟರು, ಜಾತಿವಾದಿಗಳು, ಲೂಟಿಕೋರರು ಬೇಕಾಗಿದ್ದಾರೆಯೇ ಹೊರತು, ತನ್ನಂತಹ ಪ್ರಾಮಾಣಿಕ, ಹಿಂದುತ್ವ ಹೋರಾಟಗಾರ ಬೇಡವಾಗಿದೆ ಎಂದು ಅವರು ಬಿಜೆಪಿ ನಾಯಕರ ವಿರುದ್ಧವೂ ವಾಗ್ದಾಳಿ ನಡೆಸಿದರು.