ನಾನು ಮಂತ್ರಿಯಾಗಲು ದೇವೇಂದ್ರ ಫಡ್ನವಿಸ್ ಆಶೀರ್ವಾದವಿದೆ: ರಮೇಶ್ ಜಾರಕಿಹೊಳಿ
ಬೆಳಗಾವಿ, ಸೆ.20: ನಾನು ರಾಜ್ಯದಲ್ಲಿ ಸಚಿವನಾಗಲು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಆಶೀರ್ವಾದವಿದೆ. ಹೀಗಾಗಿ ಧನ್ಯವಾದ ಹೇಳಲು ಅವರ ಭೇಟಿಯಾಗಿದ್ದೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ರವಿವಾರ ಬೆಳಗಾವಿ ಜಿಲ್ಲೆಯ ಗೋಕಾಕ ನಗರದಲ್ಲಿ ಪೌರ ಕಾರ್ಮಿಕರಿಗೆ ನಿರ್ಮಿಸಲಾದ ಪೌರಕಾರ್ಮಿಕರ ವಸತಿ ಸಮುಚ್ಚಯವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಫೆ.6ರಂದು ನಾನು ಮಂತ್ರಿಯಾದ ತಕ್ಷಣ ಅವರನ್ನು ಭೇಟಿಯಾಗಬೇಕಿತ್ತು. ಆದರೆ ಕೊರೋನ ಹಿನ್ನೆಲೆಯಲ್ಲಿ ದೇವೇಂದ್ರ ಫಡ್ನವಿಸ್ ಭೇಟಿಯಾಗಿರಲಿಲ್ಲ.
ಹೊಸದಿಲ್ಲಿಯಲ್ಲಿ ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ್ದು, ಇದು ಸೌಜನ್ಯಯುತ ಭೇಟಿಯಷ್ಟೇ. ನಾನು ಮಂತ್ರಿಯಾಗಲು ದೇವೇಂದ್ರ ಫಡ್ನವಿಸ್ ಅವರ ಪ್ರಮುಖ ಆಶೀರ್ವಾದವಿದೆ. ಹೀಗಾಗಿ ಧನ್ಯವಾದ ಹೇಳಲು ಫಡ್ನವಿಸ್ ಅವರನ್ನು ಭೇಟಿಯಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಜೊತೆಗೆ ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿ ಜಿ+2 ಮಾದರಿಯಲ್ಲಿ ಗೋಕಾಕ್ ಪೌರಕಾರ್ಮಿಕರಿಗೆ ವಸತಿ ಸಮುಚ್ಚಯ ನಿರ್ಮಿಸಿ ಉದ್ಘಾಟನಾ ಸಮಾರಂಭ ನಡೆಸಲಾಯಿತು.
"ಉಮೇಶ್ ಕತ್ತಿ ಮಂತ್ರಿಯಾದರೆ ಖುಷಿಪಡುತ್ತೇನೆ"
`ಶಾಸಕ ಉಮೇಶ್ ಕತ್ತಿ ನನ್ನ ಹಳೆಯ ಗೆಳೆಯ. ಅವರಿಗೆ ಮಂತ್ರಿ ಸ್ಥಾನ ಕೊಟ್ಟರೆ ಖುಷಿಪಡುತ್ತೇನೆ. ಎಲ್ಲರೂ ನನ್ನ ಗೆಳೆಯರೇ ಎಲ್ಲರಿಗೂ ಮಂತ್ರಿ ಸ್ಥಾನ ಸಿಕ್ಕರೆ ಒಳ್ಳೆಯದು. ಆದರೆ ಯಾರಿಗೆ ಸಚಿವ ಸ್ಥಾನ ನೀಡಬೇಕೆಂಬ ತೀರ್ಮಾನವನ್ನು ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ತಗೆದುಕೊಳ್ಳುತ್ತದೆ'
-ರಮೇಶ್ ಜಾರಕಿಹೊಳಿ, ಜಲಸಂಪನ್ಮೂಲ ಸಚಿವ