ಗೌರಿ ಹತ್ಯೆ ಪ್ರಕರಣದ ಆರೋಪಿ ಕಲಬುರ್ಗಿ ಪ್ರಕರಣದಲ್ಲೂ ಶಾಮೀಲು: ಸಾಕ್ಷ್ಯವಾದ ದೂರವಾಣಿ ಸಂಭಾಷಣೆ
ಗೌರಿ ಲಂಕೇಶ್
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಗಣೇಶ್ ಮಿಸ್ಕಿನ್ ಎಂಬಾತನ ಇಬ್ಬರು ಸಂಬಂಧಿಗಳ ನಡುವೆ ನಡೆದ 190 ಸೆಕೆಂಡ್ ಅವಧಿಯ ಫೋನ್ ಸಂಭಾಷಣೆಯೊಂದರ ಜಾಡು ಹಿಡಿದ ವಿಶೇಷ ತನಿಖಾ ತಂಡಕ್ಕೆ ಮಿಸ್ಕಿನ್ ಕನ್ನಡ ವಿದ್ವಾಂಸ ಎಂ ಎಂ ಕಲಬುರ್ಗಿ ಹತ್ಯೆ ಪ್ರಕರಣದಲ್ಲೂ ಶಾಮೀಲಾಗಿದ್ದ ಎಂಬ ಮಹತ್ವದ ಅಂಶ ತಿಳಿದು ಬಂದಿತ್ತು ಎಂದು indianexpress.com ವರದಿ ಮಾಡಿದೆ.
ಗೌರಿ ಲಂಕೇಶ್ ಅವರಿಗೆ ಗುಂಡಿಕ್ಕಿದವನೆಂದು ತಿಳಿಯಲಾದ ಪರಶುರಾಮ್ ವಾಗ್ಮೋರೆಯನ್ನು ಮೋಟಾರ್ ಸೈಕಲಿನಲ್ಲಿ ಗೌರಿ ಮನೆ ತನಕ ಕರೆತಂದವನೆಂದು ತಿಳಿಯಲಾಗಿರುವ ಗಣೇಶ್ ಮಿಸ್ಕಿನ್ನನ್ನು ಜುಲೈ 2018ರಲ್ಲಿ ಬಂಧಿಸಿದ ನಂತರ ಈ ಕುರಿತಂತೆ ಆತನ ಇಬ್ಬರು ಸಂಬಂಧಿಗಳು ಫೋನ್ ಸಂಭಾಷಣೆಯಲ್ಲಿ ಚರ್ಚಿಸಿರುವುದು ತನಿಖೆ ನಡೆಸಿದ ಸಿಟ್ಗೆ ತಿಳಿದು ಬಂದಿತ್ತು. ಒಬ್ಬ ಸಂಬಂಧಿ ಇನ್ನೊಬ್ಬಾತ 'ಅಂಕಲ್' ಜತೆ ನಾತನಾಡುತ್ತಾ ತನ್ನ ಹಿರಿಯ ಸೋದರ ಗಣೇಶ್ ಎರಡು ಕೊಲೆಗಳಲ್ಲಿ ಭಾಗಿಯಾಗಿದ್ದಾನೆಂದು ಹೇಳಿದ್ದ ಎಂದು ತನಿಖಾ ದಾಖಲೆಗಳಿಂದ ತಿಳಿದು ಬಂದಿದೆ.
ಈ ರೀತಿ ಗೌರಿ ಲಂಕೇಶ್ ಹಾಗೂ ಕಲಬುರ್ಗಿ ಹತ್ಯೆ ಪ್ರಕರಣಗಳಲ್ಲೂ ಮಿಸ್ಕಿನ್ ಶಾಮೀಲಾತಿಯಾಗಿದ್ದ ಎಂಬುದಕ್ಕೆ ಸಾಕ್ಷ್ಯವಾಗಿ ದೂರವಾಣಿ ಸಂಭಾಷಣೆಯನ್ನು ಲಿಖಿತ ರೂಪದಲ್ಲಿ ಚಾರ್ಜ್ ಶೀಟ್ ಜತೆ ಸಲ್ಲಿಸಲಾಗಿದೆ.
ಮಿಸ್ಕಿನ್ ಮತ್ತಾತನ ಸ್ನೇಹಿತ ಅಮಿತ್ ಬಡ್ಡಿಯನ್ನು ವಿಶೇಷ ತನಿಖಾ ತಂಡ ಬಂಧಿಸಿದ ದಿನವೇ ಈ ದೂರವಾಣಿ ಸಂಭಾಷಣೆ ನಡೆದಿತ್ತು ಎಂದು indianexpress.com ವರದಿ ಮಾಡಿದೆ.