ಡ್ರಗ್ಸ್ ಪ್ರಕರಣ ತನಿಖೆಯ ಮಾಹಿತಿ ಸೋರಿಕೆ ಆರೋಪ: ಸಿಸಿಬಿ ಎಸಿಪಿ ಮುದವಿ ಅಮಾನತಿಗೆ ಸರಕಾರ ಆದೇಶ
ಬೆಂಗಳೂರು, ಸೆ.23: ಡ್ರಗ್ಸ್ ದಂಧೆ ಸೇರಿ ಹಲವು ಪ್ರಮುಖ ಪ್ರಕರಣಗಳ ತನಿಖೆಯ ಮಾಹಿತಿಯನ್ನು ಆರೋಪಿಗಳ ಕಡೆಯವರಿಗೆ ಸೋರಿಕೆ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಸಿಸಿಬಿ ಎಸಿಪಿ ಎಂ.ಆರ್.ಮುದವಿಯ ಅಮಾನತಿಗೆ ಆದೇಶ ಹೊರಡಿಸಿದೆ. ಅಧಿಕಾರಿ ಜೊತೆ ಸಹಕರಿಸಿದ ಪೇದೆಯೊಬ್ಬನ ಅಮಾನತಿಗೂ ಆದೇಶ ಹೊರಡಿಸಲಾಗಿದೆ.
ವಿರೇನ್ ಖನ್ನಾಗೆ ಸಹಕರಿಸಿದ್ದಾರೆನ್ನಲಾದ ಸಿಸಿಬಿ ಎಸಿಪಿ ಮುದವಿ ಹಾಗೂ ಪೇದೆ ಮಲ್ಲಿಕಾರ್ಜುನರನ್ನ ಅಮಾನತು ಮಾಡುವಂತೆ ಆದೇಶ ಹೊರಡಿಸಲಾಗಿದೆ. ವಿರೇನ್ ಖನ್ನಾ ಬಳಿ 50 ಲಕ್ಷಕ್ಕೆ ಡೀಲ್ ಕುದುರಿಸಿದ್ದ ಮುದವಿ, ಪೇದೆ ಮಲ್ಲಿಕಾರ್ಜುನ ಮೂಲಕ ಖನ್ನಾಗೆ ಮೊಬೈಲ್ ನೀಡಿ ಸಹಕರಿಸಿದ್ದರು ಎಂಬ ಆರೋಪ ಕೇಳಿಬಂದಿದೆ.
ಎಸಿಪಿ ಮುದವಿ ರಾತ್ರಿ 10:30ರ ನಂತರ ಮೊಬೈಲ್ ಕೊಟ್ಟು ಡೀಲ್ ಕುದುರಿಸಿದ್ದರು ಎಂದು ಹೇಳಲಾಗಿದೆ. ಮುದವಿ ಸಿಸಿಬಿಯ ಮಹಿಳಾ ಸಂರಕ್ಷಣಾ ಘಟಕದ ಎಸಿಪಿಯಾಗಿದ್ದು ಖನ್ನಾಗೆ ಮೊಬೈಲ್ ನೀಡಲು 50 ಲಕ್ಷಕ್ಕೆ ಬೇಡಿಕೆ ಇಟ್ಟಿರುವ ಆರೋಪವಿದೆ. ಜೊತೆಗೆ, ವಿಚಾರಣೆಯ ಸಮಯದಲ್ಲಿ ಕೆಲ ಆರೋಪಿಗಳು ಮತ್ತು ಅವರ ಸಹಚರರೊಂದಿಗೆ ಸಂಪರ್ಕದಲ್ಲಿದ್ದರು. ಜೊತೆಗೆ, ತನಿಖೆಯ ಮಾಹಿತಿಯನ್ನು ಸೋರಿಕೆ ಮಾಡುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು.