ಸೋಮವಾರ 'ಕರ್ನಾಟಕ ಬಂದ್' ಹಿನ್ನೆಲೆ: ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್
ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ.27: ನಾಳೆ(ಸೆ.28) ಕರ್ನಾಟಕ ಬಂದ್ಗೆ ರೈತ ಸಂಘಟನೆಗಳು ಕರೆ ನೀಡಿರುವ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆಯದ ರೀತಿ ಮುಂಜಾಗ್ರತಾ ಕ್ರಮಗಳನ್ನು ಪೊಲೀಸರು ಕೈಗೊಂಡಿದ್ದಾರೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಎಲ್ಲ ವಲಯದ ಐಜಿಪಿ, ನಗರ ಪೊಲೀಸ್ ಆಯುಕ್ತ, ಹೆಚ್ವುವರಿ ಪೊಲೀಸ್ ಆಯುಕ್ತ, ಡಿಸಿಪಿಗಳಿಗೆ ಸೂಚನೆ ನೀಡಿದ್ದು, ಅಹಿತಕರ ಘಟನೆಗಳ ಆಗದಂತೆ ನಿಗಾವಹಿಸುವಂತೆ ಹೇಳಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಇಬ್ಬರು ಹೆಚ್ಚುವರಿ ಆಯುಕ್ತರು, 10 ಡಿಸಿಪಿಗಳ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದ್ದು, 60 ಎಸಿಪಿಗಳು, 140 ಇನ್ಸ್ಪೆಕ್ಟರ್ ಗಳು, 300ಕ್ಕೂ ಹೆಚ್ಚು ಪಿಎಸ್ಐಗಳು, 1500ಕ್ಕೂ ಹೆಚ್ಚು ಸಿವಿಲ್ ಹಾಗೂ ಸಂಚಾರಿ ಪೊಲೀಸರು, ಎರಡು ಸಾವಿರಕ್ಕೂ ಹೆಚ್ಚು ಕೆಎಸ್ಆರ್ಪಿ ಹಾಗೂ ಸಿಎಆರ್ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ತುಮಕೂರು ರಸ್ತೆ, ಮಾಗಡಿ ರಸ್ತೆ, ಮೈಸೂರು ರೋಡ್, ಹೊಸೂರು ರಸ್ತೆ ಹಾಗೂ ದೇವನಹಳ್ಳಿ ರಸ್ತೆಗಳಲ್ಲಿ ಪೊಲೀಸರು ಬಂದೋಬಸ್ತ್ ವಹಿಸಿದ್ದಾರೆ. ಮೊದಲು ಪ್ರತಿಭಟನಾಕಾರರು ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಸೇರುವ ಕಾರಣ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.