ಬೆಂಗಳೂರು ಅಕ್ಷರ, ಅನ್ನ ಕೊಟ್ಟ ಊರು: ‘ಉಗ್ರರ ತಾಣ’ ಹೇಳಿಕೆ ಕುರಿತ ಪ್ರಶ್ನೆಗೆ ತೇಜಸ್ವಿ ಸೂರ್ಯ ಪ್ರತಿಕ್ರಿಯೆ
ಬೆಂಗಳೂರು, ಸೆ.30: ಬೆಂಗಳೂರು ನನಗೆ ಅಕ್ಷರ, ಅನ್ನ ಕೊಟ್ಟು ನನ್ನನ್ನು ಸಂಸದನಾಗಿ ಮಾಡಿ ಇಡೀ ದೇಶದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ ನಾಡು ಎಂದು ಸಂಸದ ತೇಜಸ್ವಿ ಸೂರ್ಯ, 'ಉಗ್ರರ ತಾಣ' ಎಂಬ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ನೂತನ ಅಧ್ಯಕ್ಷರಾಗಿ ನಿಯುಕ್ತಗೊಂಡ ಬಳಿಕ ನಗರಕ್ಕೆ ಆಗಮಿಸಿದ ನಂತರ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಪೊಲೀಸ್ ಠಾಣೆಯೊಂದನ್ನು ಧ್ವಂಸ ಮಾಡಲು ಮುಂದಾದಾಗ ನನ್ನ ರಕ್ತ ಕುದಿಯುತ್ತದೆ. ಪಿಎಫ್ಐ ಗೂಂಡಾಗಿರಿಗೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿತ್ತು. ಅದೇ ಕಾರಣಕ್ಕೆ ಅವರನ್ನು ಬೆಂಬಲಿಸುತ್ತಿದ್ದ ಕಾಂಗ್ರೆಸ್ನವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಬೆಂಗಳೂರಿನ ಸುರಕ್ಷತೆಗೆ ಎನ್ಐಎ ಬೇಕು. ಆದರೆ, ಎನ್ಐಎ ಬರುವುದರಿಂದ ಎಸ್ಡಿಪಿಐ-ಕಾಂಗ್ರೆಸ್ ನಡುವಿನ ಮ್ಯಾಚ್ ಫಿಕ್ಸಿಂಗ್ ಹಾಳಾಗುತ್ತದೆ. ಅದನ್ನು ತಪ್ಪಿಸಲು ಮನಸ್ಸಿಲ್ಲದ ಕಾರಣ ಕಾಂಗ್ರೆಸ್ ಮುಖಂಡರು ತಪ್ಪು ಹೇಳಿಕೆ ನೀಡುತ್ತಿದ್ದಾರೆ. ತಮ್ಮ ಪಕ್ಷದ ಮೀಸಲು ಕ್ಷೇತ್ರದ ಶಾಸಕರನ್ನು ರಕ್ಷಿಸಲಾಗದ ಕಾಂಗ್ರೆಸ್ ನನ್ನ ಹೇಳಿಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ದೂರಿದರು.