ಹಳೆಗನ್ನಡದ ಅಧ್ಯಯನ ಅತ್ಯಗತ್ಯ: ಪ್ರೊ. ಓಂಕಾರಪ್ಪ
‘ಹಳೆಗನ್ನಡದಲ್ಲಿ ಕಾವ್ಯ ರಸಸ್ವಾದ’ ಕಾರ್ಯಕ್ರಮ
ಚಿಕ್ಕಮಗಳೂರು, ಸೆ.25: ಸಿದ್ಧತೆ ಇಲ್ಲದಿದ್ದರೆ ಹಳೆಗನ್ನಡ ಸಿದ್ಧಿಸುವುದಿಲ್ಲ. ಸಂಸ್ಕೃತ ಅಧ್ಯಯನದಿಂದ ಹಳೆಗನ್ನಡವನ್ನು ಅರಿತುಕೊಳ್ಳಬಹುದು ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಕೆ.ಓಂಕಾರಪ್ಪಹೇಳಿದರು.
ಅವರು ನಗರದ ಎಂಎಲ್ಎಂಎನ್ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ಹಾಗೂ ಅಜ್ಜಂಪುರ ಜಿ.ಸೂರಿ ಪ್ರತಿಷ್ಠಾನ ಆಯೋಜಿಸಿದ್ದ ಕಾವ್ಯ ತಿಳುವಳಿಕೆ ಕಾರ್ಯಕ್ರಮದಲ್ಲಿ ‘ಹಳೆಗನ್ನಡದಲ್ಲಿ ಕಾವ್ಯ ರಸಸ್ವಾದ’ ಕುರಿತು ಮಾತನಾಡುತ್ತಿದ್ದರು.
ಸುದೀರ್ಘವಾದ ಕನ್ನಡ ಚರಿತ್ರೆಯಲ್ಲಿ ಪೂರ್ವ ಹಳೆಗನ್ನಡ, ಹಳೆಗನ್ನಡ, ನಡುಗನ್ನಡ, ಹೊಸಗನ್ನಡ ಸೇರಿದಂತೆ ವಿವಿಧ ಪ್ರಕಾರಗಳು ಒಂದರ ಬಲದ ಮೇಲೆ ಇನ್ನೊಂದು ಮುನ್ನಡೆಯುತ್ತದೆ. ಕವಿ ಕಾಲಾತೀತ. ಒಳ್ಳೆಯ ಕಾವ್ಯಗಳು ಎಲ್ಲ ಕಾಲಕ್ಕೂ ಪ್ರಸ್ತುತ. ಕೇಶಿರಾಜನ ಶಬ್ದಮಣಿದರ್ಪಣ ವ್ಯಾಕರಣ ಶಾಸ್ತ್ರವಾದರೂ ಸೊಗಸಾದ ಕೃತಿ. 1,500ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯಕ್ಕೆ ವೈವಿಧ್ಯತೆ ಇದೆ ಎಂದು ನುಡಿದರು.
ಹಳೆಗನ್ನಡದಲ್ಲಿ ಪಾಂಡಿತ್ಯ ಪ್ರದರ್ಶನ ಕವಿತ್ವಕ್ಕಿಂತ ಹೆಚ್ಚು ಆಶ್ರಯದಾತನನ್ನು ವೈಭವೀಕರಿಸುತ್ತದೆ. ಅರಮನೆ ನಂತರ ಗುರುಮನೆಯಲ್ಲಿ ಕಾವ್ಯಹುಟ್ಟುತ್ತದೆ. ಸಮಾಧಾನವಾಗಿ ಪೂರ್ವಸಿದ್ಧತೆಯೊಂದಿಗೆ ಓದಿದರೆ ಅಪೂರ್ವ ನಿಧಿಗಳ ಆಗರವಿದು ಎಂಬುದು ಅರಿವಾಗುತ್ತದೆ. ನಿಜವಾದ ಕಾವ್ಯ ಬದುಕಿನೊಳಗಿಂದ ಹುಟ್ಟಿ ಬದುಕನ್ನು ಹಸನುಗೊಳಿಸುತ್ತದೆ. ಕಾವ್ಯಾಸ್ವಾದನೆ ಮತ್ತು ಸಜ್ಜನರ ಸಹವಾಸ ಅಪೂರ್ವವಾದ ಆನಂದವನ್ನು ತಂದುಕೊಡುತ್ತದೆ. ಆದಿಕವಿ ಪಂಪ ಕಾವ್ಯಭಾಷೆಯನ್ನು ಕನ್ನಡದಲ್ಲಿ ಪರಿಪೂರ್ಣವಾಗಿ ರೂಪುಗೊಳಿಸಿದ. ಸಾಹಿತ್ಯಕ್ಕೆ ಮೂಲದ್ರವ್ಯ ಬದುಕು ಎಂದವರು ವಿಶ್ಲೇಷಿಸಿದರು.
ಭಾವ, ವಿಭಾವ ಮತ್ತು ಅನುಭಾವ ಪರಿಷ್ಕರಣದ ಹಂತ ತಲುಪಿದಾಗ ಕಾವ್ಯ ಸಶಕ್ತವಾಗಿ ಹೊಮ್ಮುತ್ತದೆ. ಉತ್ಪತ್ತಿಯಾದದ್ದನ್ನು ಸವಿಯಬಹುದು. ಕಾವ್ಯರಸ ಉತ್ಪತ್ತಿ ಅಲ್ಲ, ವಾಸ್ತವವಾಗಿಅದೊಂದು ನಿಷ್ಪತ್ತಿ. ಇದನ್ನು ನೋಡಲು ಸಾಧ್ಯವಿಲ್ಲ. ಮನಸ್ಸೆಂಬ ಕನ್ನಡಿ ನಿರ್ಮಲವಾಗಿದ್ದಾಗ ಅಲೌಕಿಕವಾದ ಆನಂದ ಕಾವ್ಯ ಓದಿದಾಗ ಸಿಗುತ್ತದೆ. ಕವಿ ಸಮಶೃತಿಗಳುಳ್ಳ ವೀಣೆ ಎಂದು ಪ್ರೊ. ಓಂಕಾರಪ್ಪ ಬಣ್ಣಿಸಿದರು.
ಸಾಹಿತಿ ಉಪನ್ಯಾಸಕ ಬೆಳವಾಡಿ ಮಂಜುನಾಥ ಉಪನ್ಯಾಸ ನೀಡಿ, ಹಳೆಗನ್ನಡ ಉಳಿದಿರುವುದೇ ಅಧಿಕ ಅಂಕಗಳಿಕೆಗೆ ಸಹಕಾರಿ ಎಂಬ ಕಾರಣಕ್ಕಾಗಿಯೆ ಹಳೆಗನ್ನಡ ಸಾಹಿತ್ಯ ಇಂದು ಉಳಿಯುವಂತಾಗಿದೆ ಎಂದರು.
ಆಶಾಕಿರಣದ ಅಧ್ಯಕ್ಷ ಡಾ. ಜೆ.ಪಿ.ಕೃಷ್ಣೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಂಶುಪಾಲ ಪ್ರೊ. ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ಅಜ್ಜಂಪುರ ಜಿ.ಸೂರಿ ಪ್ರತಿಷ್ಠಾನದ ಅಧ್ಯಕ್ಷ ಸೂರಿ ಶ್ರೀನಿವಾಸ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎನ್. ಗುರುವೇಶ್ ಮತ್ತು ವಕೀಲ ಎಚ್.ಸಿ. ನಟರಾಜ್ ಮುಖ್ಯಅತಿಥಿಗಳಾಗಿ ಮಾತನಾಡಿದರು.
13ನೆ ಶತಮಾನದಲ್ಲಿಯೇ ಹಳೆಗನ್ನಡ ಕಾವ್ಯದಲ್ಲಿ ಕಾವೇರಿ ನೀರಿನ ಹಂಚಿಕೆ ಪ್ರಸ್ತಾಪವಿದೆ. ತಮಿಳರಿಂದ ನೀರು ಬಳಕೆಯ ಬಗ್ಗೆ ತಕರಾರು ಕೇಳಿಬಂದಿದೆ. ಇಂತಹ ಮಹತ್ವದ ಸಂಗತಿಗಳು ನಮ್ಮ ರಾಜಕಾರಣಿಗಳ ಗಮನಕ್ಕೆ ಬರುವುದಿಲ್ಲ. ನೆಲ ಮತ್ತು ಜಲ ಜೊತೆಗೆ ಸಮಕಾಲೀನ ಸಂಗತಿಗಳ ಬಗ್ಗೆ ಸಾಹಿತ್ಯ ಬೆಳಕನ್ನು ಚೆಲ್ಲುತ್ತದೆ.
- ಪ್ರೊ. ಓಂಕಾರಪ್ಪ