‘ಸಾಮಾಜಿಕ ಸರ್ಜಿಕಲ್ ದಾಳಿಗೆ ಬಲಿಯಾಗಿರುವ ದಲಿತರು’
► ಶಿಕ್ಷಣ ಇಲಾಖೆಯಲ್ಲಿನ ಕನ್ನಡ ವಿರೋಧಿ ಅಧಿಕಾರಿಗಳನ್ನು ಕಿತ್ತೆಸೆಯಿರಿ.
► ಒಳನಾಡು, ಹೊರನಾಡು, ಗಡಿನಾಡು ಕನ್ನಡಿಗರಿಗೆ ಉದ್ಯೋಗದ ಭರವಸೆ ನೀಡಿ.
► ಕನ್ನಡ ಶಾಲೆಗಳಿಗೆ ಒಳ್ಳೆಯ ಇಂಗ್ಲಿಷ್ ಶಿಕ್ಷಕರನ್ನು ಕೊಡಿ.
► ಅಂಗನವಾಡಿಗಳಲ್ಲಿನ ಅಸಮಾನತೆ ಹೋಗಲಾಡಿಸಿ. ಅಂಗನವಾಡಿಗಳನ್ನು ಪೂರ್ವಪ್ರಾಥಮಿಕ ಶಾಲೆಗಳೆಂದು ಬದಲಾಯಿಸಿ.
► ರೈತರ ಮೇಲಿನ ಆರ್ಥಿಕ ಸರ್ಜಿಕಲ್ ದಾಳಿ ತಡೆಯಿರಿ.
ರಾಯಚೂರು,ಡಿ.2: ಕನ್ನಡ ಕವಿಗಳು ದೇಶಭಕ್ತಿಯನ್ನು ಭಾವುಕ ಮತ್ತು ಬೌದ್ಧಿಕ ನೆಲೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಆದರೆ ಇತ್ತೀಚೆಗೆ ದೇಶ ಭಕ್ತಿಯ ಬಗ್ಗೆ ನಡೆಯುತ್ತಿರುವ ಚರ್ಚೆಯಲ್ಲಿನ ಅನ್ಯಾರ್ಥ, ಅಪಾರ್ಥಗಳು ಅನಾರೋಗ್ಯಕರ ಅನರ್ಥಕ್ಕೆ ಕಾರಣವಾ ಗುತ್ತಿವೆ. ದೇಶಭಕ್ತಿಯ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗಬಾರದು; ನಮ್ಮ ದೇಶದ ಪ್ರತಿ ಪ್ರಜೆಯದೂ ದೇಶಭಕ್ತಿ ಬದ್ಧತೆಯನ್ನೊಳಗೊಂಡ ವ್ಯಕ್ತಿತ್ವವಾಗಿರಬೇಕು. ಆದರೆ ದೇಶಭಕ್ತಿಯನ್ನು ರಾಜಕೀಯ ಪಕ್ಷಗಳ ಅಪ್ರಬುದ್ಧ ವ್ಯಾಖ್ಯಾನದ ಬಲಿಪಶು ಮಾಡಬಾರದು ಎಂದು ಸಮ್ಮೇಳನಾಧ್ಯಕ್ಷ ಬರಗೂರು ರಾಮಚಂದ್ರಪ್ಪ ಎಚ್ಚರಿಸಿದ್ದಾರೆ.
ಸೈನಿಕರನ್ನೂ ಪಕ್ಷರಾಜಕೀಯದ ಅಂಗವಾಗಿ ನೋಡುವ, ರಾಜಕೀಯಕ್ಕೆ ಬಳಸಿಕೊಳ್ಳುವ ಪ್ರವೃತ್ತಿ ದೇಶಭಕ್ತಿಗೆ ಬಗೆಯುವ ದ್ರೋಹವಾಗುತ್ತದೆ. ಇತ್ತೀಚಿನ ಪಾಕ್ ಉಗ್ರಗಾಮಿಗಳ ಅಡಗುದಾಣಗಳ ಮೇಲೆ ನಡೆದ ನಿರ್ದಿಷ್ಟ ದಾಳಿಗಾಗಿ ನಮ್ಮ ಸೈನಿಕರಿಗೆ ಸಲಾಂ ಹೇಳಲೇಬೇಕು. ಸಾವಿಗಂಜದ ಸೈನಿಕರ ದೇಶಭಕ್ತಿಯನ್ನು ಮೆಚ್ಚಲೇಬೇಕು. ಅದೇ ಸಂದರ್ಭದಲ್ಲಿ ಸೈನಿಕರ ಸರ್ಜಿಕಲ್ ದಾಳಿಯು ರಾಜಕೀಯ ಚರ್ಚೆಯಾಗಬಾರದೆಂಬ ವಿವೇಕ, ಔಚಿತ್ಯಗಳು ನಮ್ಮ ದೇಶಭಕ್ತಿಗೆ ಬೇಕು ಎಂದು ಅವರು ಅಭಿಪ್ರಾಯಪಟ್ಟರು. ದೇಶಭಕ್ತಿಗೆ ಪಕ್ಷಗಳ ಪಟ್ಟ ಕಟ್ಟಬಾರದು. ಉಗ್ರಗಾಮಿ ವಿರುದ್ಧದ ಸರ್ಜಿಕಲ್ ದಾಳಿಯನ್ನು ಮೆಚ್ಚಲು ಪಕ್ಷ ರಾಜಕೀಯ ಅಡ್ಡಿಯಾಗಬಾರದು. ಸೈನಿಕ ಸರ್ಜಿಕಲ್ ದಾಳಿಯನ್ನು ಮೆಚ್ಚಿದರೆ ನಾವು ಬಿಜೆಪಿಯಾಗುವುದಿಲ್ಲ. ಅನ್ನ ಭಾಗ್ಯ ಯೋಜನೆ ಮೆಚ್ಚಿದರೆ ಕಾಂಗ್ರೆಸ್ ಆಗುವುದಿಲ್ಲ. ನಿಜದ ಮೆಚ್ಚುಗೆಗೆ ಮಡಿವಂತಿಕೆ ಬೇಕಾಗಿಲ್ಲ. ಈ ಮಡಿವಂತಿಕೆ ಕನ್ನಡ ಸಾಹಿತ್ಯದಲ್ಲಿ ಇಲ್ಲ. ಆದರೆ ದೇಶದ ಹೊರಗಿನ ಸೈನಿಕ ಸರ್ಜಿಕಲ್ ದಾಳಿಯನ್ನು ಮೆಚ್ಚುತ್ತಲೇ ದೇಶದ ಒಳಗಿನ ಸಾಮಾಜಿಕ ಸರ್ಜಿಕಲ್ ದಾಳಿಗಳನ್ನು ನಾವು ವಿರೋಧಿಸಬೇಕು. ಹಾಗಾದರೆ ಈ ಸಾಮಾಜಿಕ ಸರ್ಜಿಕಲ್ ದಾಳಿಗಳು ಯಾವುವು? ಜಾತಿವಾದ, ಕೋಮುವಾದ, ಲಿಂಗತ್ವ ಅಸಮಾನತೆ, ಆರ್ಥಿಕ ಅಸಮಾನತೆ - ಮುಂತಾದ ಸಾಮಾಜಿಕ ಸರ್ಜಿಕಲ್ ದಾಳಿಗಳನ್ನು ವಿರೋಧಿಸಿ, ಜಾತಿವಿನಾಶ, ಧಾರ್ಮಿಕ ಸೌಹಾರ್ದ, ಮಹಿಳಾ ನ್ಯಾಯ, ಸಾಮಾಜಿಕ ನ್ಯಾಯ ಮತ್ತು ಸಮಾನತೆಗಳನ್ನು ಸ್ಥಾಪಿಸುವುದು ಸರಕಾರ ಹಾಗೂ ಸಮಾಜದ ಜವಾಬ್ದಾರಿಯಾಗಬೇಕು ಎಂದು ಅವರು ಹೇಳಿದರು.