ಮುಖ್ಯಮಂತ್ರಿ ಆಗಮನ ದಿನದಂದು ವಸತಿ ರಹಿತರಿಂದ ಪ್ರತಿಭಟನೆ: ರುದ್ರಯ್ಯ
ಮೂಡಿಗೆರೆ, ಡಿ.5: ತಾಲೂಕಿನ ವಸತಿ ರಹಿತರಿಗೆ ಜಾಗ ನೀಡುವಂತೆ ಆಗ್ರಹಿಸಿ ಡಿ.8ರಂದು ಮೂಡಿಗೆರೆಗೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಸಿಪಿಐಎಮ್ಎಲ್ನ ರಾಜ್ಯ ಕಾರ್ಯದರ್ಶಿ ಹಾಗೂ ವಸತಿ ರಹಿತರ ಹೋರಾಟ ವೇದಿಕೆ ಅಧ್ಯಕ್ಷ ಬಿ.ರುದ್ರಯ್ಯ ತಿಳಿಸಿದ್ದಾರೆ.
ಪಟ್ಟಣದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭೂಮಿ ಮತ್ತು ವಸತಿ ಯುವ ಹೋರಾಟ ವೇದಿಕೆಯಿಂದ ಭೂ ಮತ್ತು ವಸತಿರಹಿತರಿಗೆ ಭೂಮಿ ನೀಡುವ ಉದ್ದೇಶದಿಂದ ರಾಜ್ಯಾದ್ಯಂತ ಹೋರಾಟ ನಡೆಸುತ್ತಿದ್ದು, ಕಳೆದ ನ.22ರಂದು ಬೆಳಗಾವಿ ಅಧಿವೇಶನದಲ್ಲಿ ಭಾಗವಹಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ,ಕಂದಾಯ ಸಚಿವ ಕಾಗೋಡು ತಿಮ್ಮಪ್ಪಸೇರಿದಂತೆ ಸಚಿವರ ಬಳಿ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗಿತ್ತು. ನಮ್ಮ ಪರವಾಗಿ ವಿರೋಧ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ಬೆಂಬಲ ನೀಡಿದ್ದವು.
ಆಗ ಮುಖ್ಯಮಂತ್ರಿ ಸಿದ್ದರಾ ಮಯ್ಯ ಅವರು,ಮೂಡಿಗೆರೆ ತಾಲೂಕಿನಲ್ಲಿ ತಾಲೂಕು ಆಡಳಿತ ಜಾಗ ಗುರುತು ಮಾಡಿ ನವೆಂಬರ್ ಅಂತ್ಯದೊಳಗೆ ವಸತಿ ರಹಿತರಿಗೆ ನಿರ್ದೇಶನ ನೀಡುವ ಭರವಸೆ ನೀಡಿದ್ದರು. ಆದರೆ ಈವರೆಗೂ ಕಾರ್ಯರೂಪಕ್ಕೆ ತಂದಿಲ್ಲ.
ಈ ಹಿನ್ನೆಲೆಯಲ್ಲಿ ಡಿ.8ರಂದು ಮುಖ್ಯಮಂತ್ರಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ತಾಲೂಕು ಆಡಳಿತ ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ ಮುಖ್ಯಮಂತ್ರಿಗಳೇ ನಮ್ಮ ಬಳಿಗೆ ಬರುವವರೆಗೂ ಹೋರಾಟ ನಡೆಸಲಾಗುವುದು ಎಂದ ಅವರು, ಗ್ರಾಪಂಯಿಂದ ಸಂಸತ್ ಚುನಾವಣೆವರೆಗೂ ಬಡವರ ಪರ ಎಂದು ಹೇಳುವವರು, ಗೆದ್ದ ನಂತರ ಉಳ್ಳವರ ಪರವಾಗಿ ಕೆಲಸ ಮಾಡುತ್ತಾರೆ ಸಾಮಾನ್ಯ ಜನರ ಕೆಲಸ ಮಾಡುವುದಿರಲಿ, ಸಮಸ್ಯೆಗಳನ್ನು ಆಲಿಸುವ ಪರಿಜ್ಞಾನವೂ ಇರುವುದಿಲ್ಲ. ಡಿ.8ರಂದುಡಿ.ಎಸ್.ಕೃಷ್ಣಪ್ಪ ಗೌಡ ಅವರ ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ದಲಿತರ ಏಳಿಗೆಗಾಗಿ, ಬಡವರ ಪರವಾಗಿ ಹಾಗೂ ಸಾಮಾಜಿಕ ಕಳಕಳಿಯುಳ್ಳ ಕೃಷ್ಣಪ್ಪಗೌಡರ ಜನ್ಮದಿನಾಚರಣೆಗೆ ನಮ್ಮ ಸಂಪೂರ್ಣ ಬೆಂಬಲವಿದೆ.
ಇಲ್ಲಿನ ರಾಜಕಾರಣಿಗಳು ಕೂಡ ಕೃಷ್ಣಪ್ಪಗೌಡರ ಆದರ್ಶಗಳನ್ನು ಪಾಲನೆ ಮಾಡಿದರೆ ಅಂತಹ ಮಹಾತ್ಮರ ಜನ್ಮದಿನಾಚರಣೆಗೆ ಅರ್ಥ ಸಿಕ್ಕಿದಂತಾಗುತ್ತದೆ ಎಂದು ಹೇಳಿದರು. ಗೋಷ್ಠಿಯಲ್ಲಿ ವಸತಿ ಮತ್ತು ಹೋರಾಟ ವೇದಿಕೆ ಕಾರ್ಯದರ್ಶಿ ಶಿವಪ್ಪ,ವಿಠಲ್ ಉಪಸ್ಥಿತರಿದ್ದರು.