ಎತ್ತಿನಹೊಳೆ ಯೋಜನೆಯ ಮಹತ್ವದ ಸಭೆ ವಿಫಲ
ಬೆಂಗಳೂರು, ಡಿ.26: ಹದಿಮೂರು ಸಾವಿರ ಕೋಟಿ ರೂ. ವೆಚ್ಚದ ಎತ್ತಿನಹೊಳೆ ಯೋಜನೆಯ ಸಂಬಂಧ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಮಹತ್ವದ ಸಭೆ ವಿಫಲವಾಗಿದೆ.
ಕರಾವಳಿ ಭಾಗದ ಜನಪ್ರತಿನಿಧಿಗಳ ಸಭೆಯಲ್ಲಿ ಸಚಿವರುಗಳನ್ನು ವಿಪಕ್ಷ ಬಿಜೆಪಿಯ ಶಾಸಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಸಭೆಯ ಬಳಿಕವೂ ಸಚಿವರುಗಳು ಮತ್ತು ಬಿಜೆಪಿ ನಾಯಕರ ನಡುವೆ ವಾಗ್ವಾದ ನಡೆದಿದೆ ಎಂದು ತಿಳಿದು ಬಂದಿದೆ.
ಎತ್ತಿನ ಹೊಳೆ ಅಧ್ಯಯನಕ್ಕೆ ತಂಡ ರಚನೆ ಮಾಡಬೇಕು. ಅಷ್ಟರ ತನಕ ಯೋಜನೆಯನ್ನು ನಿಲ್ಲಿಸಬೇಕು ಎಂದು ಬಿಜೆಪಿ ನಾಯಕರು ಸಭೆಯಲ್ಲಿ ಆಗ್ರಹಿಸಿದರು.ಸಭೆಯಲ್ಲಿ ಗೊಂದಲ ಉಂಟಾಗಿ ಯಾವುದೇ ನಿರ್ಣಯ ಕೈಗೊಳ್ಳಲು ಸಾಧ್ಯವಾಗಲಿಲ್ಲ.
ಸಚಿವರಾದ ಬಿ.ರಮಾನಾಥ ರೈ, ಯು.ಟಿ.ಖಾದರ್, ಪ್ರಮೋದ್ ಮದ್ವರಾಜ್, ಸಂಸದ ನಳೀನ್ ಕುಮಾರ್ ಕಟೀಲ್, ಶಾಸಕರಾದ ವಸಂತ ಬಂಗೇರ, ಶಕುಂತಳಾ ಶೆಟ್ಟಿ, ಅಭಯಚಂದ್ರ ಜೈನ್, ಕೋಟ ಶ್ರೀನಿವಾಸ ಪೂಜಾರಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾಜಿ ಶಾಸಕರುಗಳು, ಮತ್ತು ಯೋಜನೆಯ ಪರವಿರೋಧಿ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
ನೇತ್ರಾವತಿ ನೀರು ಕೊಡಬಾರದೆಂದೇನು ಇಲ್ಲ. ಆದರೆ ನೀರು ಕೊಟ್ಟರೆ ಅಲ್ಲೇನು ಸಿಗುವುದಿಲ್ಲ ಎನ್ನುವುದ ವಾಸ್ತವ.. ನಮ್ಮ ಪ್ರಶ್ನೆಗಳಿಗೆ ಸರಕಾರ ಉತ್ತರ ನೀಡಲಿಲ್ಲ.ದಕ್ಷಿಣ ಕನ್ನಡ ಜನರ ಭಾವನೆಗಳಿಗೆ ಸರಕಾರ ಸ್ಪಂದಿಸುತ್ತಿಲ್ಲ. ಈ ಕಾರಣದಿಂದಾಗಿ ನಾವು ಸಭೆಯನ್ನು ಅರ್ಧದಲ್ಲಿ ಬಹಿಷ್ಕರಿಸಿರುವುದಾಗಿ ಸಭೆಯ ಬಳಿಕ ಸಂಸದ ನಳಿನ್ ಕುಮಾರ್ ಕಟೀಲ್ ದೂರಿದರು.