ಶಿವಮೊಗ್ಗ: ಒಂದು ತಿಂಗಳಲ್ಲಿ 39 ಹೆಚ್1ಎನ್1 ಪ್ರಕರಣ; ಮಹಾಮಾರಿಗೆ ಇಬ್ಬರು ಬಲಿ !
ಶಿವಮೊಗ್ಗ, ಜ. 7: ಜಿಲ್ಲೆಯಾದ್ಯಂತ ಬೇಸಿಗೆಯ ಪ್ರಾರಂಭದಲ್ಲಿಯೇ ರಣ ಬಿಸಿಲು ಮೈ ಸುಡಲಾರಂಭಿಸಿದೆ. ಇದರ ಬೆನ್ನಲ್ಲೆ ವಿವಿಧ ರೋಗಗಳು ಕೂಡ ಕಾಣಿಸಿಕೊಳ್ಳಲಾರಂಭಿಸಿವೆ. ಇದಕ್ಕೆ ಸಾಕ್ಷಿ ಎಂಬಂತೆ ಇಷ್ಟು ದಿನ ಜಿಲ್ಲೆಯಾದ್ಯಂತ ನಿಯಂತ್ರಣದಲ್ಲಿದ್ದ ಹೆಚ್1ಎನ್1 (ಹಂದಿ ಜ್ವರ) ರೋಗ ಇದೀಗ ಮತ್ತೆ ನಾಗರೀಕರನ್ನು ಕಾಡಲಾರಂಭಿಸಿದ್ದು, ಈ ರೋಗಕ್ಕೆ ಇಬ್ಬರು ಬಲಿಯಾಗಿದ್ದಾರೆ!
ಮತ್ತೊಂದೆಡೆ ಹೆಚ್1ಎನ್1 ರೋಗ ಉಲ್ಬಣಿಸುತ್ತಿರುವುದರಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾ ಆರೋಗ್ಯ ಇಲಾಖೆಯು, ವ್ಯಾಪಕ ಮುನ್ನೆಚ್ಚರಿಕೆ ಕ್ರಮದ ಜೊತೆಗೆ ನಾಗರೀಕರಲ್ಲಿ ಜನಜಾಗೃತಿ ಮೂಡಿಸುವ ಕೆಲಸ ಪ್ರಾರಂಭಿಸಿದೆ. ಈ ರೋಗಕ್ಕೆ ನೀಡಲಾಗುವ ಟ್ಯಾಮಿಪ್ಲೂ ಮಾತ್ರೆಯನ್ನು ಉಚಿತವಾಗಿ ಪೂರೈಕೆ ಮಾಡುತ್ತಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸಾ ನೀುವ ವ್ಯವಸ್ಥೆ ಮಾಡಲಾರಂಭಿಸಿದೆ.
ತೀರ್ಥಹಳ್ಳಿಯಲ್ಲಿ ಹೆಚ್ಚು: ಆರೋಗ್ಯ ಇಲಾಖೆಯ ಅದಿಕೃತ ಮಾಹಿತಿಗಳ ಪ್ರಕಾರ, ಜನವರಿ ಮಾಹೆಯಿಂದ ಫೆ. 6 ರವರಿಗಿನ ಅವಧಿಯಲ್ಲಿ ಜಿಲ್ಲೆಯಾದ್ಯಂತ ಹೆಚ್1ಎನ್1ಗೆ ಸಂಬಂಧಿಸಿದ 39 ಪ್ರಕರಣಗಳು ಕಂಡುಬಂದಿವೆ. ತೀರ್ಥಹಳ್ಳಿ ಹಾಗೂ ಭದ್ರಾವತಿಯಲ್ಲಿ ಶಂಕಿತ ಜ್ವರದಿಂದ ಬಳಲುತ್ತಿದ್ದ ಓರ್ವ ಪುರುಷ ಮತ್ತು ಮಹಿಳೆ ಮೃತಪಟ್ಟಿರುವ ಘಟನೆ ಕೂಡ ವರದಿಯಾಗಿದೆ. ಇದರಿಂದ ನಾಗರೀಕರು ಸಾಕಷ್ಟು ಆತಂಕಕ್ಕೆ ತುತ್ತಾಗುವಂತೆ ಮಾಡಿದೆ.
ಕಳೆದ ಒಂದು ತಿಂಗಳಲ್ಲಿ ಹೊಸನಗರ ಹಾಗೂ ಶಿಕಾರಿಪುರ ತಾಲೂಕಿನಲ್ಲಿ ಹೆಚ್1ಎನ್1ಗೆ ಸಂಬಂಧಿಸಿದ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಉಳಿದಂತೆ ಶಿವಮೊಗ್ಗ ತಾಲೂಕಿನಲ್ಲಿ 6, ತೀರ್ಥಹಳ್ಳಿಯಲ್ಲಿ 20, ಸಾಗರದಲ್ಲಿ 6, ಹೊಸನಗರದಲ್ಲಿ 6 ಹಾಗೂ ಭದ್ರಾವತಿಯಲ್ಲಿ 1 ಪ್ರಕರಣ ದಾಖಲಾಗಿದೆ. ಮಂಗನಕಾಯಿಲೆ ಕಾಯಿಲೆಯಿಂದ ಬಳಲುತ್ತಿರುವ ತೀರ್ಥಹಳ್ಳಿ ತಾಲೂಕಿನಲ್ಲಿ ದೊಡ್ಡ ಪ್ರಮಾಣದಲ್ಲಿ ಹೆಚ್1ಎನ್1 ಜ್ವರ ಕಾಣಿಸಿಕೊಂಡಿರುವುದು ಸ್ಥಳೀಯ ನಾರೀಕರ ನಿದ್ದೆಗೆಡುವಂತೆ ಮಾಡಿದೆ.
ಜನಜಾಗೃತಿ: ಜಿಲ್ಲೆಯಲ್ಲಿ ಹೆಚ್1ಎನ್1 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆಯು ಜನಜಾಗೃತಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ’ಅತೀ ಹೆಚ್ಚು ಪ್ರಕರಣಗಳು ಕಂಡುಬಂದಿರುವ ತೀರ್ಥಹಳ್ಳಿ ತಾಲೂಕಿನಾದ್ಯಂತ ತೀವ್ರ ನಿಗಾವಹಿಸಲಾಗಿದ್ದು, ಶಂಕಿತ ರೋಗ ಪೀಡಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಉಚಿತ ಆ್ಯಂಬುಲೆನ್ಸ್ಗಳ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಜಿಲ್ಲೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ’ ಎಂದು ಜಿಲ್ಲಾ ಆರೊಗ್ಯಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಂಕರಪ್ಪರವರು ತಿಳಿಸಿ್ದಾರೆ.
’ಸೋಂಕು ಪೀಡಿತ ಪ್ರದೇಶಗಳಿಗೆ ಹೋಗಬೇಡಿ’ : ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಂಕರಪ್ಪ
’ಹೆಚ್1ಎನ್1 ಪರೀಕ್ಷೆ, ಔಷಧಿ ಹಾಗೂ ಚಿಕಿತ್ಸೆಯನ್ನು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಹಂದಿ ಜ್ವರ ದೃಢಪಟ್ಟಲ್ಲಿ ವೈದ್ಯರಿಂದ ಟ್ಯಾಮಿಪ್ಲೂ ಔಷಧಿಯ ಚಿಕಿತ್ಸೆ ನೀಡಲಾಗುತ್ತದೆ. ಶಂಕಿತ ರೋಗಿಗಳು ಉಪಯೋಗಿಸಿದ ಯಾವುದೇ ವಸ್ತು ಅಥವಾ ಪದಾರ್ಥಗಳನ್ನು ಮುಟ್ಟುವ ಅಥವಾ ಉಪಯೋಗಿಸುವ ಮೊದಲು ಬಿಸಿ ನೀರಿನಲ್ಲಿ ಸ್ವಚ್ಚಗೊಳಿಸಬೇಕು. ಕೈಗಳನ್ನು ಸೋಪಿನಿಂದ ತೊಳೆದುಕೊಳ್ಳಬೇಕು. ಹೆಚ್1ಎನ್1 ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವುದನ್ನು ಮುಂದೂಡಬೆೀಕು.
ರೋಗ ಹರಡುವಿಕೆ ತೀವ್ರಗೊಳ್ಳುತ್ತಿರುವ ಪ್ರದೇಶದಲ್ಲಿ ಮೂಗು ಮತ್ತು ಬಾಯಿಗೆ ಮಾಸ್ಕ್ ಬಳಸಬೇಕು. ಸೋಂಕು ತಗುಲಿದವರು ಕನಿಷ್ಠ ಏಳು ದಿನಗಳವರೆಗೆ ಹೊರಗಡೆ ಬರಬಾರದು. ರೋಗ ಪೀಡಿತ ವ್ಯಕ್ತಿ ಕೆಮ್ಮುವಾಗ, ಸೀನುವಾಗ ಟಿಶ್ಯೂ ಅಥವಾ ಇತರೆ ವಸ್ತ್ರಗಳಿಂದ ಮೂಗ-ಬಾಯಿ ಮುಚ್ಚಿಕೊಳ್ಳಬೇಕು. ನಂತರ ಅದನ್ನು ಸುಟ್ಟು ಹಾಕಬೇಕು. ಪ್ರಾರಂಭದ ಹಂತದಲ್ಲಿಯೇ ರೋಗಿಯು ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಂಡರೆ ಈ ರೋಗ ಗುಣಪಡಿಸಬಹುದು. ಶಂಕಿತ ಲಕ್ಷಣಗಳಿಂದ ಬಳಲುತ್ತಿರುವವರು ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿಯಿತ್ತು ಚಿಕಿತ್ಸೆ ಪಡೆದುಕೊಳ್ಳಬೇಕು’ ಎಂದು ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಂಕರಪ್ಪರವರು ನಾಗರೀಕರಿಗೆ ಸಲಹೆ ನೀಡಿದ್ದಾರೆ.
ಹಂದಿ ಜ್ವರದ ರೋಗ ಲಕ್ಷಣಗಳು
*** ಹಂದಿ ಜ್ವರವು ಮೊದಲು ಮೆಕ್ಸಿಕೋ ದೇಶದಲ್ಲಿ ಹಂದಿಯಿಂದ ಮನುಷ್ಯನಲ್ಲಿ ಕಾಣಿಸಿಕೊಂಡಿತ್ತು. ಈ ಜ್ವರದ ’ಟೈಪ್ - ಹೆಚ್1ಎನ್1’ ವೈರಾಣು ವ್ಯಕ್ತಿಯಿಂದ ವ್ಯಕ್ತಿಗೆ ನೇರವಾಗಿ ಬಾಯಿ ಅಥವಾ ಮೂಗಿನ ಉಸಿರಾಟದ ಮೂಲಕ ವೇಗವಾಗಿ ಹರಡುತ್ತದೆ. ಸಾಮಾನ್ಯ ಜ್ವರದಂತೆ ಪ್ರಾರಂಭವಾಗಿ ಕೆಮ್ಮು, ಶೀತ, ಮೂಗು ಸೋರುವುದು, ಗಂಟಲು ನೋವು, ತಲೆನೋವು, ಮೈಕೈ ನೋವು, ವಾಕರಿಕೆ, ವಾಂತಿ-ಬೇಧಿ ಆಗುವುದು ಈ ರೋಗದ ಲಕ್ಷಣಗಳಗಾಗಿವೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಹೊರಡಿಸಿರುವ ಜನಜಾಗೃತಿ ಕರಪತ್ರದಲ್ಲಿ ಮಾಹಿತಿ ನೀಡಲಾಗಿದೆ.
’ಟ್ಯಾಮಿಪ್ಲೂ ಮಾತ್ರೆ ದಾಸ್ತಾನಿದೆ’ : ಡಿ.ಹೆಚ್.ಓ. ಡಾ. ರಾಜೇಶ್ ಸುರಗೀಹಳ್ಳಿ
’ಹೆಚ್1ಎನ್1 ರೋಗಕ್ಕೆ ನೀಡಲಾಗುವ ಟ್ಯಾಮಿಪ್ಲೂ ಮಾತ್ರೆಯ ಅಗತ್ಯ ದಾಸ್ತಾನು ಇಲಾಖೆಯಲ್ಲಿದೆ. ಜಿಲ್ಲೆಯ ತಾಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಿನದ 24 ಗಂಟೆಯೂ ಈ ಮಾತ್ರೆ ಲಭ್ಯವಿರುವ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಶಂಕಿತ ಪ್ರಕರಣದ ರೋಗಿಗಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರೆ, ಸಂಬಂಧಿಸಿದ ಆಸ್ಪತ್ರೆಯವರು ಇಲಾಖೆಯನ್ನು ಸಂಪರ್ಕಿಸಿದರೆ ಉಚಿತವಾಗಿ ಟ್ಯಾಮಿಪ್ಲೂ ಮಾತ್ರೆಗಳನ್ನು ಪೂರೈಕೆ ಮಾಡಲಾಗುವುದು. ಈಗಾಗಲೇ ತೀರ್ಥಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಶಂಕಿತ ಪ್ರಕರಣದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೋರ್ವರಿಗೆ ಉಚಿತವಾಗಿ ಮಾತ್ರೆ ಪೂರೈಕೆ ಮಾಡಲಾಗಿದೆ.
ಪ್ರಸ್ತುತ ತೀರ್ಥಹಳ್ಳಿ ಹಾಗೂ ಭದ್ರಾವತಿಯಲ್ಲಿ ಮೃತಪಟ್ಟಿರುವ ರೋಗಿಗಳ ರಕ್ತದ ಮಾದರಿ ಸಂಗ್ರಹಿಸಿ ಉನ್ನತ ಮಟ್ಟದ ಪರಿಶೀಲನೆಗೆ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿತ್ತು. ಇವರಿಬ್ಬರ ಸಾವಿಗೆ ಹೆಚ್1ಎನ್1 ಕಾರಣವಾಗಿರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ. ಈ ರೋಗಕ್ಕೆ ತುತ್ತಾದವರು ಆತಂಕಪಡುವ ಅಗತ್ಯವಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳಬೇಕು. ಪ್ರಾರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪಡೆದುಕೊಂಡರೆ ಸೋಂಕು ನಿಯಂತ್ರಣಕ್ಕೆ ಸಾಧ್ಯವಾಗಲಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ (ಡಿ.ಹೆಚ್.ಓ.) ಡಾ. ರಾಜೇಶ್ ಸುರಗೀಹಳ್ಳಿಯವರು ಮನವಿ ಮಾಡಿಕೊಂಡಿದ್ದಾರೆ.
ತೀರ್ಥಹಳ್ಳಿ ತಾಲೂಕಿನಲ್ಲಿಯೇ ಹೆಚ್ಚು...!
*** ಜಿಲ್ಲೆಯ ಏಳು ತಾಲೂಕುಗಳಲ್ಲಿ ಶಿಕಾರಿಪುರ ಹಾಗೂ ಹೊಸನಗರ ತಾಲೂಕು ಹೊರತುಪಡಿಸಿ ಉಳಿದ ಐದು ತಾಲೂಕುಗಳಲ್ಲಿ ಹೆಚ್1ಎನ್1 (ಹಂದಿಜ್ವರ) ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ತೀರ್ಥಹಳ್ಳಿ ತಾಲೂಕಿನಲ್ಲಿ ಅತ್ಯದಿಕ 20 ಪ್ರಕರಣಗಳು ವರದಿಯಾಗಿವೆ. ಈ ತಾಲೂಕಿನಲ್ಲಿ ಈಗಾಗಲೇ ಮಂಗನಕಾಯಿಲೆ ಕಾಣಿಸಿಕೊಂಡು ಆತಂಕ ಮೂಡಿಸಿರುವ ಬೆನ್ನಲ್ಲೆ, ಇದೀಗ ತಾಲೂಕಿನ ವಿವಿಧೆಡೆ ಹಂದಿ ಜ್ವರ ಪ್ರಕರಣಗಳು ಪತ್ತೆಯಾಗಿರುವುದು ಸ್ಥಳೀಯ ನಾಗರೀರನ್ನು ತತ್ತರಿಸುವಂತೆ ಮಾಡಿದೆ.