ಯೋಗ ತರಬೇತುದಾರರನ್ನು ತಯಾರಿಸಲು ಪ್ರಧಾನಿ ಕರೆ
21ನೆ ಅಂತಾರಾಷ್ಟ್ರೀಯ ಯೋಗ ಸಂಶೋಧನೆ ಸಮಾವೇಶ
ಬೆಂಗಳೂರು, ಜ.3: ಯೋಗಕ್ಕೆ ವಿಶ್ವಮಾನ್ಯತೆ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಅತ್ಯುತ್ತಮ ಗುಣಮಟ್ಟದ ಯೋಗ ತರಬೇತುದಾರರನ್ನು ತಯಾರು ಮಾಡುವ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ರವಿವಾರ ಆನೇಕಲ್ ತಾಲೂಕಿನ ಜಿಗಣಿಯಲ್ಲಿರುವ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ(ವ್ಯಾಸ)ದಲ್ಲಿ ಆಯೋಜಿಸಲಾಗಿದ್ದ 21ನೆ ಅಂತಾರಾಷ್ಟ್ರೀಯ ಯೋಗ ಸಂಶೋಧನೆ ಬಳಕೆ ಕುರಿತ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯೋಗದ ಮೇಲೆ ನಮ್ಮ ಹಕ್ಕನ್ನು ಪ್ರತಿಪಾದಿಸುತ್ತ ಕೂತಿದ್ದೇವೆ. ಆದರೆ, ಇಂದು ಮಾತನಾಡುವುದಕ್ಕಿಂತ ಕೆಲಸ ಮಾಡಿ ತೋರಿಸಬೇಕಾದ ಸಂದರ್ಭ ಬಂದಿದೆ. ಯೋಗವನ್ನು ಯಾರು ಸದುಪಯೋಗ ಪಡಿಸಿಕೊಳ್ಳುತ್ತಾರೋ ಅದು ಅವರ ಆಸ್ತಿಯಾಗುತ್ತದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು. ಯೋಗದ ಬಗ್ಗೆ ವಿಶ್ವದ ಜನರ ಶ್ರದ್ಧೆಯನ್ನು ಅವರ ಸ್ವಾಸ್ಥ್ಯದ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕಾಗಿದೆ. ಆದುದರಿಂದ, ಅತ್ಯುತ್ತಮ ಗುಣಮಟ್ಟದ ಯೋಗ ತರಬೇತುದಾರರನ್ನಾಗಿ ತಯಾರಿಸಬೇಕು. ವಿಶ್ವ ಸಂಸ್ಥೆಯು ಯೋಗದ ಮಹತ್ವವನ್ನು ಅರ್ಥ ಮಾಡಿಕೊಂಡು ಜೂ.21ರಂದು ಘೋಷಿಸಿದ ವಿಶ್ವ ಯೋಗ ದಿನಾಚರಣೆಯಲ್ಲಿ 192 ರಾಷ್ಟ್ರಗಳ ಕೋಟ್ಯಂತರ ಜನರು ಪಾಲ್ಗೊಂಡಿದ್ದರು ಎಂದು ಅವರು ತಿಳಿಸಿದರು.
ವಿಶ್ವದ ಪ್ರಮುಖ ನಾಯಕರು ಭಾರತಕ್ಕೆ ಭೇಟಿ ನೀಡಿದಾಗ ಯೋಗದ ಬಗ್ಗೆ ತಿಳಿದುಕೊಳ್ಳುವ ಜಿಜ್ಞಾಸೆ ಮೂಡುತ್ತಿದೆ. ಯೋಗವನ್ನು ಯಾವ ರೀತಿಯಲ್ಲಿ ಕಲಿಯಬೇಕು, ತಮ್ಮ ತಮ್ಮ ದೇಶಗಳಲ್ಲಿ ಇದನ್ನು ಯಾವ ರೀತಿ ಪ್ರಚಾರ ಮಾಡಬೇಕು ಎಂಬ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ ಎಂದು ನರೇಂದ್ರಮೋದಿ ಹೇಳಿದರು.
2008ರಲ್ಲಿ ಬಡ ರಾಷ್ಟ್ರಗಳಲ್ಲಿ ಶೇ.80ರಷ್ಟು ಮಂದಿ ಸಾಂಕ್ರಾಮಿಕವಲ್ಲದ ರೋಗಗಳಿಂದ ಮೃತಪಟ್ಟಿದ್ದಾರೆ. 2030ರ ವೇಳೆಗೆ ಈ ಪ್ರಮಾಣವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ ಎಂಟು ಪಟ್ಟು ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಪ್ರಧಾನಿ ಆತಂಕ ವ್ಯಕ್ತಪಡಿಸಿದರು.
ಭಾರತವು ಈ ಸಾಂಕ್ರಾಮಿಕವಲ್ಲದ ರೋಗಗಳು, ಮಾನಸಿಕ ಆರೋಗ್ಯ ಪರಿಸ್ಥಿತಿಯಿಂದಾಗಿ 2030ಕ್ಕಿಂತ ಮುಂಚಿತವಾಗಿ ಸುಮಾರು 4.58 ಟ್ರಿಲಿಯನ್ ಡಾಲರ್ನಷ್ಟು ಮೊತ್ತವನ್ನು ಕಳೆದುಕೊಳ್ಳಲಿದೆ. ಭಾರತೀಯ ಯೋಗವು ಭವಿಷ್ಯದ ಮಾನವನ ಜೀವನಕ್ಕೆ ಸಹಕಾರಿಯಾಗಲಿದೆ ಎಂಬ ಶತಮಾನದ ಹಿಂದಿನ ನಂಬಿಕೆ ಇಂದು ನಿಜವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ನಾನು ಯಾವುದೊ ಒಂದು ವೈದ್ಯಕೀಯ ಪದ್ಧತಿಯ ಬಗ್ಗೆ ವಕಾಲತ್ತು ವಹಿಸುತ್ತಿಲ್ಲ. ವಿವಿಧತೆ, ನಾಗರಿಕತೆ, ಸಂಸ್ಕೃತಿ ಹಾಗೂ ರಾಷ್ಟ್ರಗಳು ತಮ್ಮ ಜ್ಞಾನ ಹಾಗೂ ಆಲೋಚನೆಗಳನ್ನು ಪರಸ್ಪರ ಹಂಚಿಕೆ ಮಾಡಿಕೊಂಡಾಗ ಮಾತ್ರ ಮಾನವ ಕಲ್ಯಾಣ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಭಾರತದ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿ ಹಾಗೂ ಆಧುನಿಕ ವೈದ್ಯಕೀಯ ಪದ್ಧತಿಯ ಸಮ್ಮಿಲನವಾಗಬೇಕು. ಯೋಗ, ಆಯುರ್ವೇದ, ನ್ಯಾಚುರೋಪಥಿ, ಯುನಾನಿ, ಸಿದ್ಧ, ಹೋಮಿಯೋಪಥಿ ಹಾಗೂ ಆಧುನಿಕ ಔಷಧವನ್ನು ಅಧ್ಯಯನ ಮಾಡುವ ಸಂಶೋಧಕರು, ವೈದ್ಯರು ಒಂದೇ ವೇದಿಕೆಯಲ್ಲಿ ಸೇರಿರುವುದು ಸ್ವಾಗತಾರ್ಹ ಎಂದು ಪ್ರಧಾನಿ ಹೇಳಿದರು.
ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ , ಕೇಂದ್ರ ಸಚಿವರಾದ ಎಚ್.ಎನ್. ಅನಂತ್ಕುಮಾರ್, ಜಗತ್ಪ್ರಕಾಶ್ ನಡ್ಡಾ, ಸ್ಮತಿ ಇರಾನಿ, ಡಿ.ವಿ.ಸದಾನಂದಗೌಡ, ಶ್ರೀಪಾದ್ ಎಸ್ಸೋ ನಾಯಕ್, ಸಂಸದ ಡಿ.ಕೆ.ಸುರೇಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್, ಶಾಸಕ ಎಂ.ಕೃಷ್ಣಪ್ಪ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ವ್ಯಾಸ ಉಪಕುಲಪತಿ ಪ್ರೊ.ರಾಮಚಂದ್ರ ಜಿ.ಭಟ್, ಅಧ್ಯಕ್ಷ ಡಾ.ಎಚ್.ಆರ್.ನಾಗೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.