ಚಿನ್ನಾಭರಣ ಲಪಟಾಯಿಸುತ್ತಿದ್ದ ಇಬ್ಬರ ಬಂಧನ: 6.5 ಲಕ್ಷ ರೂ. ವೌಲ್ಯದ ಸೊತ್ತು ವಶ
ಪೊಲೀಸ್ ಸೋಗಿನಲ್ಲಿ ಕೃತ್ಯ
ಶಿವಮೊಗ್ಗ, ಫೆ. 22: ಪೊಲೀಸರ ಸೋಗಿನಲ್ಲಿ ಹಾಡ ಹಗಲೇ ಮಹಿಳೆಯರ ಚಿನ್ನಾಭರಣ ಲಪಟಾಯಿಸುತ್ತಿದ್ದ ತಂಡದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮೂಲತಃ ಬೆಂಗಳೂರು ನಿವಾಸಿ ಪ್ರಸ್ತುತ ಕಲಬುರಗಿಯ ಗೌಸ್ ನಗರದಲ್ಲಿ ವಾಸವಾಗಿರುವ ಮುಹಮ್ಮದ್ ಕಂಬಾರ್ ಯಾನೆ ಅಲಿ ಸೈಯದ್ (30) ಹಾಗೂ ಮೂಲತಃ ಮುಂಬೈ ನಿವಾಸಿಯಾಗಿದ್ದು, ಪ್ರಸ್ತುತ ಕಲಬುರಗಿಯಲ್ಲಿರುವ ಹಸನ್ ಅಜಂ ಯಾನೆ ಅಜಂ (27) ಎಂದು ತಿಳಿದು ಬಂದಿದೆ.
ಆರೋಪಿಗಳಿಂದ ಸುಮಾರು 225 ಗ್ರಾಂ. ತೂಕದ ಚಿನ್ನಾಭರಣ, ಒಂದು ಬೈಕನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇವುಗಳ ಒಟ್ಟು ವೌಲ್ಯ 6.5 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ತಿಳಿಸಿದ್ದಾರೆ. ಬುಧವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶಿವಮೊಗ್ಗ ನಗರದ ಚೌಡೇಶ್ವರಿ ಚೆಕ್ ಪೋಸ್ಟ್ ಹತ್ತಿರ ಪೊಲೀಸರು ವಾಹನ ತಪಾಸಣೆ ನಡೆಸುವ ವೇಳೆ ಅನುಮಾನಾಸ್ಪದವಾಗಿ ಬೈಕ್ನಲ್ಲಿ ಆಗಮಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು.
ಕೋಟೆ ಹಾಗೂ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ 4 ಸರಗಳ್ಳತನ, ಎರಡು ವಂಚನೆ ಹಾಗೂ ಒಂದು ಬೈಕ್ ಕಳವು ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದರು.
ಆರೋಪಿಗಳು ಪೊಲೀಸರೆಂದು ಹೇಳಿಕೊಂಡು ನಗರದ ಎರಡು ಕಡೆ ಮಹಿಳೆಯರಿಂದ ಲಕ್ಷಾಂತರ ರೂ.ವೌಲ್ಯದ ಚಿನ್ನಾಭರಣ ಅಪಹರಿಸಿ ಪರಾರಿಯಾಗಿದ್ದರು. ಜನನಿಬಿಡ ಪ್ರದೇಶಗಳಲ್ಲಿಯೇ ಬೀಡುಬಿಡುತ್ತಿದ್ದಆರೋಗಳು,‘ನಗರದಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದೆ.
ನಿಮ್ಮ ಮೈಮೇಲಿರುವ ಚಿನ್ನಾಭರಣ ಬಿಚ್ಚಿ ಬ್ಯಾಗ್ನಲ್ಲಿಟ್ಟುಕೊಳ್ಳಿ’ ಎಂದು ಮಹಿಳೆಯರಲ್ಲಿ ಭಯ ಹುಟ್ಟಿಸಿ ಚಿನ್ನಾಭರಣಗಳನ್ನು ಸುರಕ್ಷಿತವಾಗಿ ಬ್ಯಾಗ್ನಲ್ಲಿಟ್ಟು ಕೊಡುವ ನಾಟಕ ಮಾಡಿ ಅವರಿಗೆ ತಿಳಿಯದಂತೆ ಚಿನ್ನಾಭರಣ ಎಗರಿಸುತ್ತಿದ್ದರು ಎಂದು ತಿಳಿಸಿದರು.